ಮಂಗಳೂರು: ವಿವಾದಿತ ಗೋಡೆ ಬರಹ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಬಂಧಿತರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಸಾದತ್ (50) ಬಂಧಿತ ಆರೋಪಿ. ಈ ಮೊದಲು ತೀರ್ಥಹಳ್ಳಿ ನಿವಾಸಿಗಳಾದ ಮುಹಮ್ಮದ್ ಶಾರೀಕ್ (22), ಮಾಝ್ ಮುನೀರ್ ಅಹ್ಮದ್ (21) ಎಂಬುವರನ್ನು ಬಂಧಿಸಲಾಗಿತ್ತು. ಇಂದು ಬಂಧನಕ್ಕೊಳಗಾದ ಸಾದತ್, ಆರೋಪಿ ಮುಹಮ್ಮದ್ ಶಾರೀಕ್ ಚಿಕ್ಕಪ್ಪನಾಗಿದ್ದು ಈತ ಆರೋಪಿಗಳಿಗೆ ಸಹಾಯ ಮತ್ತು ಆಶ್ರಯ ನೀಡಿದ ಆರೋಪ ಎದುರಿಸುತ್ತಿದ್ದಾನೆ.
ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು.ಕೊರೊನಾ ಪರೀಕ್ಷೆಗಾಗಿ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಮಂಗಳೂರು ಪೊಲೀಸರು ಗೋಡೆ ಬರಹ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಹಿರಿಯ ಅಧಿಕಾರಿಗಳ ಸಭೆ ನಡೆಸಿದ್ದಾರೆ.
ಪೊಲೀಸ್ ಕಮೀಷನರ್ ವಿಕಾಸ್ ಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಡಿಸಿಪಿಗಳಾದ ಹರಿರಾಂ ಶಂಕರ್, ವಿನಯ ಗಾಂವ್ಕರ್, ತನಿಖಾಧಿಕಾರಿ ಎಸಿಪಿ ಜಗದೀಶ್, ಸಿಸಿಬಿ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ಅವರನ್ನೊಳಗೊಂಡ ತಂಡ ಸಭೆ ನಡೆಸಿ ಜಾಲವನ್ನು ಭೇದಿಸಲು ವಿವಿಧ ತಂತ್ರಗಳನ್ನು ರೂಪಿಸಲು ಚರ್ಚೆ ನಡೆಸಿದೆ.