ಮಂಗಳೂರು: ಲಾಕ್ಡೌನ್ ನಲ್ಲಿ ತೈಲ ಬೆಲೆ ಏರಿಕೆಯಿಂದ ಕಂಗೆಟ್ಟಿರುವಾಗಲೇ ವಿದ್ಯುತ್ ಮೀಟರ್ ದರ ಏರಿಕೆ ಮಾಡುವ ಮೂಲಕ ಜನರ ಹಸಿವಿನ ಹೊಟ್ಟೆಗೆ ಹೊಡೆದಂತಾಗಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.

ರಾಜ್ಯದಲ್ಲಿ ವಿದ್ಯುತ್ ಬೇಡಿಕೆಗಿಂತ ಹೆಚ್ಚುವರಿಯಾಗಿ ಉತ್ಪಾದನೆಯಾಗುತ್ತಿದ್ದು ಆದರೆ ಈ ನಡುವೆ ಅದಾನಿ ಕಂಪೆನಿ ಸೇರಿದಂತೆ ಹಲವು ಕಂಪೆನಿಗಳಿಂದ ಸರಕಾರ ವಿದ್ಯುತ್ ಖರೀದಿಸುತ್ತಿದೆ. ಕಂಪೆನಿಗಳ ಅನುಕೂಲ ನೀತಿಯನ್ನು ಅನುಸರಿಸಿ ಜನರಿಗೆ ಸಂಕಷ್ಟದ ಹೊರೆ ನೀಡುತ್ತಿದ್ದು, ಸರಕಾರಕ್ಕೆ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವ ಇಲ್ಲ. ಬದಲಾಗಿ ವ್ಯಾಪಾರಿಗಳಂತೆ ಕಾರ್ಯ ನಿರ್ವಹಿಸುತ್ತಿದೆ ಎಂದು ಆರೋಪಿಸಿದರು. ಇಂಧನ ದರ ಏರಿಕೆಯಾಗಿ ಅಗತ್ಯ ವಸ್ತುಗಳ ಬೆಲೆಯೂ ಗಗನಕ್ಕೇರಿದೆ. ಇಂತಹ ಸಂದರ್ಭದಲ್ಲಿ ಸಕಾರಣವಿಲ್ಲದೆ ವಿದ್ಯುತ್ ದರ ಏರಿಕೆಯನ್ನು ಕೈಬಿಡಬೇಕು ಎಂದು ರಮಾನಾಥ ರೈ ಆಗ್ರಹಿಸಿದರು.

ಮಾಜಿ ಶಾಸಕ ಜೆ.ಆರ್.ಲೋಬೋ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮುಖಂಡರಾದ ಶಶಿಧರ ಹೆಗ್ಡೆ, ಶಾಹುಲ್ ಹಮೀದ್, ಅಬ್ದುಲ್ ರವೂಫ್, ಭಾಸ್ಕರ್ ಕೆ., ಅಶೋಕ್ ಡಿ.ಕೆ., ಸದಾಶಿವ ಉಳ್ಳಾಲ್, ಅಪ್ಪಿ, ನವೀನ್ ಡಿಸೋಜ, ಪ್ರತಿಭಾ ಕುಳಾಯಿ, ಶಬೀರ್ ಸಿದ್ಧಕಟ್ಟೆ, ಬೇಬಿ ಕುಂದರ್, ಸುರೇಂದ್ರ ಕಾಂಬ್ಳಿ, ಅಬ್ಬಾಸ್ ಅಲಿ, ಲಾರೆನ್ಸ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.











