ಮಂಗಳೂರು: ವ್ಯಕ್ತಿಯೊಬ್ಬ ಮಹಿಳೆಯನ್ನು ನಂಬಿಸಿ ಕಾರಿನಲ್ಲಿ ಕರೆದೊಯ್ದು ಅತ್ಯಾಚಾರವೆಸಗಿದ ಘಟನೆ ನಗರದ ಪಾಂಡೇಶ್ವರ ಮಹಿಳಾ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ಆರೋಪಿ ಕೂಳೂರು ನಿವಾಸಿ ಪ್ರಶಾಂತ್ ಅಪ್ಪು ಎನ್ನಲಾಗಿದೆ.
ಮಹಿಳೆ ತನ್ನ ಗಂಡನಿಗೆ ವಿಚ್ಚೇದನ ನೀಡಿದ ಬಳಿಕ ತಂದೆ-ತಾಯಿಯೊಂದಿಗೆ ವಾಸವಿದ್ದರು. ಮಹಿಳೆ ಪ್ರತ್ಯೇಕ ಮನೆ ಮಾಡುವ ಉದ್ದೇಶದಿಂದ ಬಾಡಿಗೆ ಮನೆಯನ್ನು ಹುಡುಕುತ್ತಿದ್ದರು. ಈ ವೇಳೆ ಬೆಂಗರೆ ಕೂಳೂರು ನಿವಾಸಿ ಪ್ರಶಾಂತ್ ಅಪ್ಪು ಎಂಬುವವರಿಂದ ಬಾಡಿಗೆ ಮನೆಯನ್ನು ಪಡೆದಿದ್ದರು.
ಮಹಿಳೆಗೆ ಜ್ವರ ಬಂದಿದ್ದ ಕಾರಣ ಬಾಡಿಗೆ ಮನೆಗೆ ತೆರಳಿರಲಿಲ್ಲ. ಆದರೆ ಮಹಿಳೆ ತನ್ನ ಬಟ್ಟೆಗಳನ್ನು ಬಾಡಿಗೆ ರೂಮ್ನಲ್ಲಿ ಬಿಟ್ಟು ಬಂದಿದ್ದರು. ಈ ಸಮಯದಲ್ಲಿ ಆರೋಪಿ ಎಡಬಿಡದೆ ಫೋನ್ ಮಾಡಿ ‘ಬಟ್ಟೆಗಳನ್ನು ವಾಪಾಸ್ ತೆಗೆದುಕೊಂಡು ಹೋಗಿ’ ಎಂದು ತಿಳಿಸಿದ್ದಾನೆ.
ಜೂ.8ರಂದು ಆರೋಪಿ ಮಹಿಳೆಗೆ ನಿನ್ನ ಬಟ್ಟೆಗಳನ್ನು ಕುಂಟಿಕಾನ ಬಳಿ ತಂದು ನೀಡುವುದಾಗಿ ಹೇಳಿದ್ದನು. ಅದರಂತೆ ಆತ ಅಲ್ಲಿಗೆ ಕಾರಿನಲ್ಲಿ ಬಂದಿದ್ದಾನೆ, ಮಹಿಳೆ ತನ್ನ ಬಟ್ಟೆ ತರಲು ಕಾರಿನ ಬಳಿ ಹೋದಾಗ ‘ಬಟ್ಟೆ ಬಿಟ್ಟು ಬಂದಿದ್ದೇನೆ, ನೀನು ಬಂದು ತೆಗೆದುಕೊಂಡು ಹೋಗು’ ಎಂದು ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾನೆ.
ಆ ಬಳಿಕ ಆರೋಪಿ ಜನಸಂಚಾರವಿಲ್ಲದ ಜಾಗದಲ್ಲಿ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದಾನೆ. ಇದಾದ ಕೆಲ ದಿನಗಳ ನಂತರ ಆರೋಪಿ ಮಹಿಳೆಗೆ ಕರೆ ಮಾಡಿ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದನು., ಇದಕ್ಕೆ ಮಹಿಳೆ ನಿರಾಕರಿಸಿದಾಗ ‘ಮದುವೆಯಾಗದಿದ್ದಲ್ಲಿ ಕೊಲುತ್ತೇನೆ’ ಎಂದು ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.