ಮಂಗಳೂರು: ಕರಾವಳಿ ಭಾಗದಲ್ಲಿ ಬಹುಬಳಕೆಯಲ್ಲಿರುವ ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಪರಿಗಣಿಸಬೇಕೆಂದು ಆಗ್ರಹಿಸಿ ತುಳು ಸಂಘಟನೆಗಳು ಟ್ವೀಟ್ ಅಭಿಯಾನಕ್ಕೆ ಕರೆ ನೀಡಿವೆ.
ಕರ್ನಾಟಕ ಮತ್ತು ಕೇರಳ ರಾಜ್ಯದಲ್ಲಿ ಪಂಚದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಭಾಷೆಯನ್ನು ಅಧಿಕೃತ ಭಾಷೆಯನ್ನಾಗಿ ಘೋಷಿಸಿ, ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇದೇ ಭಾನುವಾರ ಜೈ ತುಳುನಾಡ್ ಸೇರಿದಂತೆ ಇನ್ನಿತರ ತುಳು ಭಾಷಾ ಸಂಘಟನೆಗಳು ತುಳು ಭಾಷೆಗೆ ಸಾಂವಿಧಾನಿಕ ಸ್ಥಾನಮಾನಕ್ಕೆ ಆಗ್ರಹಿಸಿ, ಸರ್ಕಾರದ ಕಣ್ಣು ತೆರೆಸಲು ನಿರ್ಧರಿಸಿದೆ.
ಈ ಹಿಂದೆಯೂ ತುಳುಭಾಷೆಯ ಸಾಂವಿಧಾನಿಕ ಸ್ಥಾನಮಾನಕ್ಕಾಗಿ ಟ್ವೀಟ್ ಅಭಿಯಾನ ಸೇರಿದಂತೆ ಅನೇಕ ರೀತಿಯ ಹೋರಾಟಗಳನ್ನು ತುಳು ಸಂಘಟನೆಗಳು ಮಾಡಿದ್ದು,ಆದರೆ ಸರ್ಕಾರ ತುಳುವರಿಗೆ ನ್ಯಾಯ ಒದಗಿಸಿಲ್ಲ. ಕರಾವಳಿ ಭಾಗದ ರಾಜಕಾರಣಿಗಳು ಕೂಡ ಭಾಷೆಯ ವಿಚಾರವಾಗಿ ಆಸಕ್ತಿ ತೋರಿಸದ ಕಾರಣ ಇನ್ನೂ ತುಳುವರ ಕನಸು ನನಸಾಗದೆ ಉಳಿದಿದೆ. ಇನ್ನು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಅತೀ ಹೆಚ್ಚು ಬಿಜೆಪಿ ಶಾಸಕರೇ ಇದ್ದು, ರಾಜ್ಯ ಮತ್ತು ಕೇಂದ್ರದಲ್ಲೂ ಬಿಜೆಪಿ ಸರ್ಕಾರವೇ ಇದೆ. ಹೀಗಿದ್ದೂ ನಮ್ಮ ತುಳು ಭಾಷೆಗೊಂದು ಸಾಂವಿಧಾನಿಕ ಮಾನ್ಯತೆಯನ್ನು ಕೊಡಿಸಲು ಆಗದೆ ಇರೋದು ನಮ್ಮ ದೌರ್ಭಾಗ್ಯವೇ ಸರಿ ಎಂದು ಜೈ ತುಳುನಾಡ್ ಸಂಘಟನೆಯ ಬೆಂಗಳೂರು ವಿಭಾಗದ ಮುಖ್ಯಸ್ಥ ಜಯಪ್ರಸಾದ್ ಅವರು ಹೇಳಿದರು.
ಭಾನುವಾರ ಬೆಳಗ್ಗೆಯಿಂದ ಈ ಟ್ವೀಟ್ ಅಭಿಯಾನವು ಆರಂಭವಾಗಲಿದೆ. #TuluOfficialinKA_KL ಎಂಬ ಹ್ಯಾಷ್ಟ್ಯಾಗ್ನೊಂದಿಗೆ ಟ್ವೀಟ್ ಮಾಡುವಂತೆ ಸಂಘಟಕರು ವಿನಂತಿಸಿಕೊಂಡಿದ್ದಾರೆ. ತುಳು ಭಾಷೆಗೆ ಅಧಿಕೃತ ಸಾಂವಿಧಾನಿಕ ಗೌರವ, ಸ್ಥಾನಮಾನ ಸಿಗಲು ಸರ್ಕಾರ ಮತ್ತು ಜನಪ್ರತಿನಿಧಿಗಳನ್ನು ಬಡಿದೆಬ್ಬಿಸೋದು ಅನಿವಾರ್ಯವಾಗಿದೆ. ಈ ಕಾರ್ಯಕ್ಕೆ ಸಮಸ್ತ ತುಳುವರು ಕೈಜೋಡಿಸುವಂತೆ ಜೈತುಳುನಾಡ್ ಸಂಘಟನೆಯ ಮುಖ್ಯಸ್ಥರು ಕರೆ ನೀಡಿದ್ದಾರೆ.