ಮಂಗಳೂರು: ಖುತುಬುಝ್ಝಮಾನ್ ಹಝ್ರತ್ ಅಸ್ಸಯ್ಯದ್ ಮುಹಮ್ಮದ್ ಶರೀಫುಲ್ ಮದನಿ ತಂಙಳ್ರವರ ಉಳ್ಳಾಲ ದರ್ಗಾದಲ್ಲಿ ಐದು ವರ್ಷಕ್ಕೊಮ್ಮೆ ಒಂದು ತಿಂಗಳ ಕಾಲ ನಡೆಯುವ ‘ಉಳ್ಳಾಲ ಉರೂಸ್’ಗೆ ದರ್ಗಾ ಆಡಳಿತ ಮಂಡಳಿ ಸಿದ್ಧತೆ ನಡೆಸುತ್ತಿದೆ. ಪವಿತ್ರ ರಂಝಾನ್ ಉಪವಾಸ ಮುಗಿದ ತಕ್ಷಣ ಉರೂಸ್ ಸಿದ್ಧತಾ ಕಾರ್ಯಕ್ಕೆ ಚಾಲನೆ ನೀಡಲಿದ್ದು, 2021ರ ಅಕ್ಟೋಬರ್ 28ರಿಂದ ನ.20ರವರೆಗೆ ಉಳ್ಳಾಲ ಉರೂಸ್ ನಡೆಸಲು ಚಿಂತನೆ ನಡೆಸಲಾಗಿದೆ ಎಂದು ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಹೇಳಿದರು.
ದರ್ಗಾ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಧಾರ್ಮಿಕ ಶ್ರದ್ಧಾಕೇಂದ್ರವಾಗಿ ದೇಶ ವಿದೇಶಗಳಿಂದ ಇಲ್ಲಿಗೆ ಭಕ್ತಾದಿಗಳು ಆಗಮಿಸುತ್ತಿದ್ದು, ಪ್ರವಾಸೋದ್ಯಮ ಇಲಾಖೆಯಿಂದಲೂ ಧಾರ್ಮಿಕ ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿದೆ. 2020ರಲ್ಲಿ ಉರೂಸ್ ನಡೆಯಬೇಕಾಗಿದ್ದು, ಕೋವಿಡ್ 19 ಹಿನ್ನೆಲೆಯಲ್ಲಿ ಉರೂಸ್ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು. ಇದೀಗ ಭಕ್ತಾದಿಗಳು ಉಳ್ಳಾಲ ಉರೂಸ್ ಕುರಿತು ಮಾಹಿತಿಗಾಗಿ ನಿರೀಕ್ಷೆಯಲ್ಲಿದ್ದಾರೆ. ಉರೂಸು ನಡೆಯುವ 6 ತಿಂಗಳ ಮೊದಲೇ ಸಿದ್ಧತೆ ಆಗಬೇಕಾಗಿದ್ದು, ಈ ನಿಟ್ಟಿನಲ್ಲಿ ದರ್ಗಾ ಸಮಿತಿ ಯೋಜನೆ ಹಾಕಿಕೊಂಡಿದ್ದು ಮೇ 28ಕ್ಕೆ ಆಚರಣೆಗೆ ಸಂಬಂಧಿಸಿದ ಕೊಡಿಯೇರಿಸುವ ಕಾರ್ಯ ಆರಂಭಗೊಂಡು ಅಕ್ಟೋಬರ್ನಿಂದ ನವಂಬರ್ ವರೆಗೆ ಉರೂಸ್ ಆಚರಣೆ ನಡೆಸಲು ಸಿದ್ಧತೆ ನಡೆಸಲಾಗಿದೆ. ಉಳ್ಳಾಲ ವ್ಯಾಪ್ತಿಯ ಮೊಹಲ್ಲಾಗಳ ಸದಸ್ಯರು, ಸೇರಿದಂತೆ ವಿವಿಧ ಸಮಿತಿಗಳ ರಚನೆ ಕಾರ್ಯ ನಡೆಯಲಿದೆ ಎಂದು ತಿಳಿಸಿದರು.
ಉಪಾಧ್ಯಕ್ಷರಾದ ಯು.ಕೆ. ಮೋನು, ಬಾವಾ ಮಹಮ್ಮದ್, ಕಾರ್ಯದರ್ಶಿ ಮಹಮ್ಮದ್ ತ್ವಾಹಾ, ಲೆಕ್ಕ ಪರಿಶೋಧಕ ಯು.ಟಿ. ಇಲ್ಯಾಸ್, ಜೊತೆ ಕಾರ್ಯದರ್ಶಿ ನೌಷಾದ್ ಅಬೂಬಕ್ಕರ್, ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಯು.ಕೆ. ಇಬ್ರಾಹಿಂ ಕಕ್ಕೆತೋಟ, ಜೊತೆ ಕಾರ್ಯದರ್ಶಿ ಎ.ಜೆ.ಮೊಯ್ದಿನ್, ಅರೆಬಿಕ್ ಟ್ರಸ್ಟ್ ಉಪಾಧ್ಯಕ್ಷ ಅಬೂಬಕ್ಕರ್, ಸದಸ್ಯರಾದ ಇಬ್ರಾಹಿಂ ಉಳ್ಳಾಲ ಬೈಲ್, ಹಸನಬ್ಬ ಕಡಪ್ಪರ, ಆಲಿಮೋನು ಉಳ್ಳಾಲ, ನಝೀರ್ ಸುಂದರಿಭಾಗ್, ಹಮ್ಮಬ್ವ ಕೋಟೆಪುರ, ಅಹಮ್ಮದ್ ಮುಕ್ಕಚ್ಚೇರಿ, ಮಯ್ಯದ್ದಿ ಕೋಡಿ, ಹಮೀದ್ ಕೋಡಿ, ದರ್ಗಾ ಸಮಿತಿ ಸದಸ್ಯ ಫಾರೂಕ್ ಉಳ್ಳಾಲ್, ಕಾರ್ಯದರ್ಶಿ ಮಹಮ್ಮದ್ ತ್ವಾಹಾ ಇದ್ದರು.