ಉಳ್ಳಾಲ: ಅಪಘಾತದ ಕಾರಣವನ್ನೇ ಮುಂದಿಟ್ಟು ಯುವಕರ ತಂಡವೊಂದು ಬೈಕ್ ಸವಾರ ಯುವಕನ ಮೇಲೆ ಮಾರಣಾಂತಿಕ ಹಲ್ಲೆಗೈದ ಘಟನೆ ಉಳ್ಳಾಲದಲ್ಲಿ ನಡೆದಿದೆ.
ಉಳ್ಳಾಲ ಧರ್ಮನಗರ ನಿವಾಸಿ ದಿವಾಕರ್ (34)ಹಲ್ಲೆಗೊಳಗಾದ ಯುವಕ. ದಿವಾಕರ್ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದು ಗುರುವಾರ ಬೆಳಗ್ಗೆ 9 ಗಂಟೆಯ ವೇಳೆಗೆ ಉಳ್ಳಾಲದ ಅಬ್ಬಕ್ಕ ಸರ್ಕಲ್ ನ ಎಟಿಎಂ ಸೆಂಟರ್ ಬಳಿ ತನ್ನ ಬೈಕನ್ನು ಧರ್ಮನಗರದ ಕಡೆಗೆ ತಿರುಗಿಸುತ್ತಿದ್ದ ವೇಳೆ ಹಿಂದಿನಿಂದ ಸ್ಕೂಟಿ ಚಲಾಯಿಸಿಕೊಂಡು ಬಂದ ಮುಸ್ಲಿಂ ಯುವತಿಯೊಬ್ಬರು ದಿವಾಕರ್ ಅವರ ಬೈಕಿಗೆ ಡಿಕ್ಕಿಯಾಗಿದ್ದರು ಎನ್ನಲಾಗಿದೆ.
ಈ ವೇಳೆ ಯುವತಿ ಮತ್ತು ದಿವಾಕರ್ ಅವರ ದ್ವಿಚಕ್ರ ವಾಹನಗಳು ಜಖಂಗೊಂಡಿದ್ದು ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದೆ.
ದಿವಾಕರ್ ಪೊಲೀಸ್ ದೂರು ನೀಡುವುದಾಗಿ ಹೇಳಿದ್ದು ಯುವತಿ ತನ್ನ ಸಹೋದರ ಮಾತನಾಡುತ್ತಾನೆಂದು ಹೇಳಿ ನಂಬರ್ ಪಡೆದು ತೆರಳಿದ್ದರು. ರಾತ್ರಿ ದಿವಾಕರ್ ಅವರಿಗೆ ಯುವತಿಯ ಸೋದರನೆಂದು ಹೇಳಿಕೊಂಡ ವ್ಯಕ್ತಿ ಕರೆ ಮಾಡಿದ್ದು ಮಾತಾನಾಡಲು ಸಿಗುವಂತೆ ಹೇಳಿದ್ದಾನೆ.
ನಿನ್ನೆ ಸಂಜೆ ಕರೆ ಮಾಡಿದ ಅದೇ ವ್ಯಕ್ತಿ ಧರ್ಮನಗರದ ರಝಾಕ್ ಎಂಬವರ ಅಂಗಡಿ ಮುಂಭಾಗ ಕರೆಸಿಕೊಂಡಿದ್ದು ಸ್ಕೂಟಿ ಜಖಂಗೊಂಡಿದ್ದರ ಖರ್ಚು 4,500 ರೂ. ನೀಡುವಂತೆ ಕೇಳಿದ್ದಾನೆ. ದಿವಾಕರ್ ತನ್ನ ಬೈಕ್ ಕೂಡ ಜಖಂಗೊಂಡಿದ್ದು ಅದರ ಖರ್ಚನ್ನು ಕೇಳಿದ್ದು ಪೊಲೀಸ್ ದೂರು ನೀಡೋಣ, ಅಲ್ಲೇ ತೀರ್ಪು ಆಗಲಿ ಎಂದು ಹೇಳಿದ್ದಾರೆ.
ಅಷ್ಟಕ್ಕೇ ಕ್ರುದ್ಧನಾದ ಯುವತಿಯ ಸಹೋದರ ಮತ್ತು ಆತನ ಜೊತೆಯಲ್ಲಿದ್ದ ಇಬ್ಬರು ಯುವಕರು, ದಿವಾಕರ್ ಮೇಲೆ ಕೈಮಾಡಿದ್ದು ಕೈ ಮತ್ತು ತಲೆಗೆ ಕಲ್ಲಿನಿಂದ ಹಲ್ಲೆಗೈದಿದ್ದಾರೆ.
ಅಪಘಾತವೆಸಗಿದ ಯುವತಿಯ ಸ್ಕೂಟರಿನ ಫೋಟೊವನ್ನು ದಿವಾಕರ್ ಕ್ಲಿಕ್ಕಿಸಿದ್ದು ವಾಹನದ ವಿಮೆ ಅವಧಿ ಮುಗಿದಿರುವುದಾಗಿ ಹೇಳಲಾಗುತ್ತಿದೆ. ಗಾಯಾಳು ದಿವಾಕರ್ ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.