ಮಂಗಳೂರು: ಬಾವಿಗೆ ಬಿದ್ದಿದ್ದ ಬೆಕ್ಕಿನ ಮರಿಯೊಂದನ್ನು ಪ್ರಾಣಿ ಪ್ರೇಮಿ ರಜಿನಿ ದಾಮೋದರ ಶೆಟ್ಟಿ ಎಂಬವರು ರಕ್ಷಿಸಿದ್ದಾರೆ. ಜೆಪ್ಪು ಬಳಿ ಸಂದೀಪ್ ಎಂಬುವರ 200 ಮೀಟರ್ ಉದ್ದದ ನೀರಿದ್ದ ಬಾವಿಗೆ ಬೆಕ್ಕಿನ ಮರಿ ಬಿದ್ದಿತ್ತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಮಂಗಳೂರಿನ ಪ್ರಾಣಿ ಪ್ರೇಮಿ ರಜಿನಿ ಅವರು ತನ್ನ ಪತಿಯೊಂದಿಗೆ ಬಂದು ಹಗ್ಗ ಕಟ್ಟಿಕೊಂಡು ಬಾವಿಗೆ ಇಳಿದು ಬೆಕ್ಕಿನ ಮರಿ ರಕ್ಷಣೆ ಮಾಡಿದರು.
ಅವರ ಪ್ರಾಣಿಪ್ರೇಮಕ್ಕೆ ಮಂಗಳೂರಿನ ನಾಗರಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಮಂಗಳೂರಿನ ರಜಿನಿ ದಾಮೋದರ ಶೆಟ್ಟಿ ಅವರು ಈಗಾಗಲೇ ತಮ್ಮ ಪ್ರಾಣಿಪ್ರೇಮದಿಂದ ಸಾರ್ವಜನಿಕ ವಲಯದಲ್ಲಿ ಚಿರಪರಿಚಿತರಾಗಿದ್ದಾರೆ. ಈ ಹಿಂದೆಯೂ ಅವರು ಇಂತಹುದೇ ರೀತಿಯಲ್ಲಿ ಸಾಹಸದ ಮೂಲಕ ಪ್ರಾಣಿ ಪ್ರೇಮ ಮೆರೆದಿದ್ದರು. 80 ಅಡಿ ಪಾಳು ಬಾವಿಗೆ ಬಿದ್ದಿದ್ದ ನಾಯಿಯನ್ನು ರಜಿನಿ ಅವರು ರಕ್ಷಿಸಿದ್ದರು.
ರಜಿನಿ ದಾಮೋದರ ಶೆಟ್ಟಿ ಅವರ ಪ್ರಾಣಿ ಪ್ರೇಮಕ್ಕೆ ಮಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಅಪಾರ ಶ್ಲಾಘನೆ ವ್ಯಕ್ತವಾಗಿದೆ. ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಅತ್ಯಂತ ಶ್ಲಾಘನೆ ವ್ಯಕ್ತವಾಗಿದೆ.