




ಮಂಗಳೂರು: ಹಣದ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರ ದ್ವಿ ಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆಸಿ ವ್ಯಕ್ತಿಯ ಹತ್ಯೆಗೆ ಯತ್ನ ನಡೆದಿರುವ ಘಟನೆ ಮಂಗಳೂರಿನ ಆರ್ಯಸಮಾಜ ರಸ್ತೆಯಲ್ಲಿ ನಡೆದಿದೆ.
ಗಾಯಗೊಂಡ ದ್ವಿಚಕ್ರ ವಾಹನ ಸವಾರರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಲ್ಲಿಕಟ್ಟೆಯ ನಿವಾಸಿ ಮೋಹನ್ ದಾಸ್ ಶೆಟ್ಟಿ(56) ಘಟನೆಯಲ್ಲಿ ಗಾಯಗೊಂಡವರು. ಫಳ್ನೀರ್ ನಿವಾಸಿ ಮಹಮ್ಮದ್ ಶರೀಫ್ (26) ಬಂಧಿತ ಆರೋಪಿಯಾಗಿದ್ದಾನೆ.
ಭೂವ್ಯವಹಾರಕ್ಕೆ ಸಂಬಂಧಿಸಿ ಹಣದ ವ್ಯಾಜ್ಯದ ಕೋಪದಲ್ಲಿ ಮಂಗಳೂರಿನ ಪಳ್ನೀರ್ ನಿವಾಸಿ ಮಹಮ್ಮದ್ ಶರೀಫ್ ಎನ್ನುವಾತ ಕಾರಿನಿಂದ ಮೋಹನ್ ದಾಸ್ ಶೆಟ್ಟಿಗೆ ಗುದ್ದಿರುವುದಾಗಿ ತಿಳಿದುಬಂದಿದೆ.
ಸುರತ್ಕಲ್ನ ಕಾನ ಮತ್ತು ವಾಮಂಜೂರಿನಲ್ಲಿ ಆರೋಪಿ ಮಹಮ್ಮದ್ ಶರೀಫ್ ಸುಮಾರು 2 ಕೋಟಿ ರೂ. ಹಣವನ್ನು ಹೂಡಿಕೆ ಮಾಡಿದ್ದ. ಆದರೆ ಮೋಹನ್ ದಾಸ್ ಶೆಟ್ಟಿ ಮೋಸ ಮಾಡಿರುವ ಸಿಟ್ಟಿನಲ್ಲಿ ಆತ ಸ್ಕೂಟರ್ನಲ್ಲಿ ತೆರಳುವಾಗ ಮಹಮ್ಮದ್ ಶರೀಫ್ ಕಾರಿನಿಂದ ಗುದ್ದಿ ಕೊಲೆ ಯತ್ನ ನಡೆಸಿದ್ದಾನೆ.
ಈ ಸಂಬಂಧ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದ್ದು, ಮಹಮ್ಮದ್ ಶರೀಫ್ ನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.







