ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ನ ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಮುಳಿಹಿತ್ಲುವಿನಲ್ಲಿ 2 ದಿನಗಳ ಹಿಂದೆ ಕೊಲೆಯಾದ ಕಾರ್ಮಿಕ ಗಜ್ವಾನ್ ಯಾನೆ ಜಗ್ಗು ಎಂಬಾತನ ವಿಳಾಸ ಪತ್ತೆಗೆ ಪಾಂಡೇಶ್ವರ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಉತ್ತರ ಭಾರತ ಮೂಲದವನು ಎನ್ನಲಾದ ಈತನ ವಾರಸುದಾರರು ಯಾರು ಎಂಬುದು ಇದುವರೆಗೆ ಗೊತ್ತಾಗಿಲ್ಲ. ಈತನನ್ನು ನಗರದಲ್ಲಿ ಗಜ್ವಾನ್ ಎಂದು ಕರೆಯಲಾಗುತ್ತಿತ್ತು. ಆದರೆ ಈತನ ನಿಜ ಹೆಸರೇನು ಎಂಬುದು ಕೂಡ ಯಾರಿಗೂ ತಿಳಿದಿಲ್ಲ.
ಸುಮಾರು 5.5 ಅಡಿ ಎತ್ತರ, ಎಣ್ಣೆಕಪ್ಪು ಮೈಬಣ್ಣ, ದೃಢಕಾಯ ಶರೀರ, ಕಪ್ಪು ತಲೆ ಕೂದಲು, ಕುರುಚಲು ಗಡ್ಡ ಹೊಂದಿದ್ದ ಈತನ ಸಂಬಂಧಿಕರು ಅಥವಾ ಪರಿಚಯಸ್ಥರಿದ್ದರೆ ಪಾಂಡೇಶ್ವರ ಠಾಣೆಯನ್ನು (0824-2220518) ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ಕೊಲೆ ಆರೋಪಿ ಅಂಗಡಿ ಮಾಲಕ ತೌಸಿಫ್ ಹುಸೇನ್ ಮೂಲತಃ ಹಾಸನದ ಬೇಲೂರಿನವನಾಗಿದ್ದು, ನಗರದಲ್ಲಿ ವಾಸವಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ತೌಸಿಫ್ ತನ್ನಲ್ಲಿ ಕೆಲಸಕ್ಕಿದ್ದ ಜಗ್ಗುರನ್ನು ಕರೆಂಟ್ ಶಾಕ್ ಕೊಟ್ಟು ಬರ್ಬರವಾಗಿ ಹತ್ಯೆ ಮಾಡಿದ್ದ. ಆರೋಪಿಗೆ ನ್ಯಾಯಾಲಯವು 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.