




ಮಂಗಳೂರು: ಲಯನ್ಸ್ ಜಿಲ್ಲೆ 317ಡಿ ವತಿಯಿಂದ 16 ಲಕ್ಷದ ಐವತ್ತು ಸಾವಿರದ ಮೊತ್ತದ ಲಯನ್ಸ್ ಅನ್ನಪೂರ್ಣ ಯೋಜನೆ ಅಡಿಯಲ್ಲಿ ಸಾವಿರದ ಐನೂರು ಅತ್ಯಂತ ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ ಕಾರ್ಯಕ್ರಮ ಮಂಗಳೂರಿನ ಮಲ್ಲಿಕಟ್ಟೆ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.
ಲಯನ್ಸ್ ಜಿಲ್ಲಾ ಸೇವಾ ಸಂಯೋಜಕ ರಮಾನಂದ ನೂಜಿಪ್ಪಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ರವರು ಸಾವಿರದ ಐನೂರು ಅತ್ಯಂತ ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ಬಳಿಕ ಮಾತನಾಡಿ “ಬಡವರಿಗೆ ಆಹಾರ ಕಿಟ್ ವಿತರಣೆ ಒಂದು ಪುಣ್ಯದ ಕೆಲಸ. ಇದು ದೇಣಿಗೆ ನೀಡಿದ ಎಲ್ಲಾ ಲಯನ್ಸ್ ಸದಸ್ಯರುಗಳಿಗೆ ಮತ್ತು ಆಯೋಜಕರಿಗೆ ಸಲ್ಲುತ್ತದೆ” ಎಂದರು ನಾನು ಒಬ್ಬ ಲಯನ್ಸ್ ಸದಸ್ಯನಾಗಿ ಲಯನ್ಸ್ನ ಎಲ್ಲಾ ಕಾರ್ಯಕ್ರಮಗಳಿಗೆ ನನ್ನ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.
ಲಯನ್ಸ್ ಜಿಲ್ಲಾ ಗವರ್ನರ್ ಕುಡ್ಪಿ ಅರವಿಂದ್ ಶೆಣೈ ಮಾತನಾಡಿ “ಇದು ಲಯನ್ ಸದಸ್ಯರು ಲಯನ್ಸ್ ಅಂತರಾಷ್ಟ್ರೀಯ ಸಂಸ್ಥೆಗೆ ನೀಡಿದ ಗೇಣಿಗೆಯ ಫಲವಾಗಿ ಬಂದಂತಹ ಒಟ್ಟು 16 ಲಕ್ಷದ 50,000 ಅನುದಾನವನ್ನು ಸಾವಿರದ ಐನೂರು ಅತ್ಯಂತ ಬಡ ಕುಟುಂಬಗಳಿಗೆ ಈ ಯೋಜನೆ ಅಡಿಯಲ್ಲಿ ಆಹಾರ ಕಿಟ್ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿ ವಹಿಸಿದ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುದರ್ಶನ ಪಡಿಯಾರ್, ಜಿಲ್ಲಾ ಹೆಚ್ಚುವರಿ ಕಾರ್ಯದರ್ಶಿ ಚಂದ್ರಹಾಸ ರೈ ಹಾಗೂ ಲಯನ್ಸ್ ಬಿಸಿನೆಸ್ ನೆಟ್ವರ್ಕ್ನ ಸಂಯೋಜಕರಾದ ಸುರೇಶ್ ಎಂ ಎಸ್ ರವರನ್ನು ಶಾಸಕರು ಗೌರವಿಸಿದರು.
ಕಾರ್ಯಕ್ರಮದಲ್ಲಿ ಭಾರತಿ ಬಿ. ಎಂ, ಗೋವರ್ಧನ್ ಶೆಟ್ಟಿ, ಬಾಲಕೃಷ್ಣ ಹೆಗ್ಡೆ, ನ್ಯಾನ್ಸಿ ಮಸ್ಕರೇನಸ್, ಜ್ಯೋತಿ ಶೆಟ್ಟಿ, ಲೋಕೇಶ್ ಶೆಟ್ಟಿ, ಅನಿಲ್ ಕುಮಾರ್ ಪಿ ವಿ ಹಾಗೂ ಪ್ರಾಂತ್ಯಾಧ್ಯಕ್ಷರುಗಳು ವಲಯಾಧ್ಯಕ್ಷರುಗಳು ಕ್ಲಬ್ನ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪೌರಕಾರ್ಮಿಕರು, ರಿಕ್ಷಾ ಡ್ರೈವರ್ ಹಾಗೂ ವಿವಿಧ ಸೇವೆ ಸಲ್ಲಿಸುತ್ತಿರುವ ಅತಿಬಡ ಕುಟುಂಬಗಳು ಈ ಯೋಜನೆಯ ಪ್ರಯೋಜನ ಪಡೆದರು.








