ಮಂಗಳೂರು: ಗ್ಯಾರೇಜಿನಲ್ಲಿ ಕೆಲಸ ಮಾಡುವ ಯುವಕನೊಬ್ಬ ಸ್ನೇಹಿತನ ಜೊತೆಗೆ ದೇವಸ್ಥಾನಕ್ಕೆ ಹೋಗಿ ಏಕಾಏಕಿ ಅಡ್ಡೂರು ಸೇತುವೆಯಿಂದ ಕೆಳಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ನೀರಿಗೆ ಹಾರಿ ನಾಪತ್ತೆಯಾಗಿರುವ ವ್ಯಕ್ತಿ ಮೂಲತಃ ಆಕಾಶಭವನದ ನಿವಾಸಿ ಪ್ರಶಾಂತ್ (41) ಎಂದು ಗುರುತಿಸಲಾಗಿದೆ.
ಸ್ನೇಹಿತ ದೇವಿಪ್ರಸಾದ್ ಜೊತೆಗೆ ಎರಡು ದಿನಗಳ ಕಾಲ ನಗರದ ವಿವಿಧ ದೇವಸ್ಥಾನಕ್ಕೆ ತೆರಳಿ ಇಂದು ಗುರುಪುರದ ಸೇತುವೆ ಬಳಿ ಬಂದಿದ್ದರು. ಈ ನಡುವೆ ಪ್ರಶಾಂತ್ ಏಕಾಏಕಿ ಸೇತುವೆಯಿಂದ ಹಾರಿ ನೀರಿನಲ್ಲಿ ಮುಳುಗುತ್ತಿರುವುದನ್ನು ದೇವಿಪ್ರಸಾದ್ ನೋಡಿದ್ದು, ಕೂಡಲೇ ಅವರು ಅಲ್ಲಿದ್ದ ಸ್ಥಳೀಯ ಬೋಟಿನವರಿಗೆ ಮಾಹಿತಿ ನೀಡಿದ್ದಾರೆ. ಆದರೆ ಅವರು ಪತ್ತೆಯಾಗಿಲ್ಲ.
ಕೂಡಲೇ ಬಂಟ್ವಾಳ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಅವರು ಆಗಮಿಸಿ ಆತನ ದೇಹಕ್ಕಾಗಿ ಹುಡುಕಾಟ ನಡೆದಿದೆ. ಪ್ರಶಾಂತ್ ಅವರು ಕೌಟುಂಬಿಕ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇವರಿಗೆ ಮದುವೆಯಾಗಿದ್ದು, ಪುಟ್ಟ ಮಗುವೂ ಇದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಮನೆಯಲ್ಲಿ ಮಾತುಕತೆ ನಡೆದು ಬಳಿಕ ಸ್ನೇಹಿತ ದೇವಿಪ್ರಸಾದ್ ಜೊತೆಗೆ ದೇಗುಲಕ್ಕೆ ಹೋಗಿದ್ದರು. ಇದೀಗ ನಾಪತ್ತೆಯಾದಾತನ ದೇಹಕ್ಕಾಗಿ ಹುಡುಕಾಟ ಮುಂದುವರಿದಿದೆ. ಸ್ಥಳೀಯರು ಕೂಡಾ ಹುಡುಕಾಟ ಮುಂದುವರಿಸಿದ್ದಾರೆ.