Friday, July 3, 2026
spot_imgspot_img
spot_imgspot_img

ಮಂಗಳೂರು: ಜೈಲಿನೊಳಗೆ ಗಾಂಜಾ ಎಸೆತ ಪ್ರಕರಣ – ಆರೋಪಿಯ ಬಂಧನ

- Advertisement -
- Advertisement -

ಮಂಗಳೂರು: ನಗರದ ಜಿಲ್ಲಾ ಕಾರಾಗೃಹದ ಆವರಣದೊಳಗೆ ಗಾಂಜಾ ಎಸೆದ ಆರೋಪಿಯನ್ನು ಕೆಎಸ್‌ಐಎಸ್‌ಎಫ್ ಸಿಬ್ಬಂದಿ ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಹಿಡಿದಿರುವ ಘಟನೆ ಬೆಳಕಿಗೆ ಬಂದಿದೆ. ಬಂಧಿತ ಮೂಲತಃ ಬಂಟ್ವಾಳ ತಾಲೂಕಿನ ಕೊಳತ್ತಮಜಲು ಕೋಳಕೇರಿ ನಿವಾಸಿಯಾಗಿದ್ದು, ಪ್ರಸ್ತುತ ಉರ್ವದಲ್ಲಿ ವಾಸವಾಗಿರುವ ತಿಲಕ್‌ರಾಜ್ ಎಂದು ಗುರುತಿಸಲಾಗಿದೆ.

ಜುಲೈ 2ರಂದು ಮುಂಜಾನೆ ಸುಮಾರು 4.20ರ ವೇಳೆಗೆ ಆರೋಪಿ ಕಾರಾಗೃಹದ ಒಳಭಾಗದಲ್ಲಿರುವ ಅಡುಗೆಮನೆ ಪ್ರದೇಶದತ್ತ ಅನುಮಾನಾಸ್ಪದ ಪಾರ್ಸೆಲ್‌ನ್ನು ಎಸೆದಿದ್ದಾನೆ. ಈ ಕೃತ್ಯವನ್ನು ಕರ್ತವ್ಯದಲ್ಲಿದ್ದ ಕೆಎಸ್‌ಐಎಸ್‌ಎಫ್ ಆರ್‌ಪಿಸಿ ಕಿರಣ್ ಗಮನಿಸಿದ್ದು, ತಕ್ಷಣವೇ ಎಎಸ್‌ಐ ಕಿರಣ್ ಅಂಬಿಗ ಅವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸಿಬ್ಬಂದಿ ಸುಮಾರು 500 ಮೀಟರ್ ದೂರ ಆರೋಪಿಯನ್ನು ಬೆನ್ನಟ್ಟಿ ಹಿಡಿದು ವಶಕ್ಕೆ ಪಡೆದಿದ್ದಾರೆ. ನಂತರ ಉಸ್ತುವಾರಿ ಅಧಿಕಾರಿ ಪೊಲೀಸ್ ನಿರೀಕ್ಷಕ ಸುಭಾಷ್ ಅವರಿಗೆ ಮಾಹಿತಿ ನೀಡಲಾಗಿದ್ದು, ಅವರ ಸಮ್ಮುಖದಲ್ಲಿ ನಡೆದ ವಿಚಾರಣೆಯಲ್ಲಿ ಆರೋಪಿ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.

ಪ್ರಾಥಮಿಕ ತನಿಖೆಯ ಪ್ರಕಾರ, ಮೂಡುಶೆಡ್ಡೆ ನಿವಾಸಿ ಕಿರಣ್ ಎಂಬಾತ ಆರೋಪಿಗೆ ಗಾಂಜಾ, ಲೈಟರ್ ಹಾಗೂ ಗಾಂಜಾ ಸೇವನೆಗೆ ಬಳಸುವ ಪೇಪರ್‌ಗಳನ್ನು ನೀಡಿ, ಅವುಗಳನ್ನು ಕಾರಾಗೃಹದೊಳಗೆ ಎಸೆಯುವಂತೆ ಸೂಚಿಸಿದ್ದಾನೆ. ಇದಕ್ಕಾಗಿ ಆರೋಪಿಗೆ ರೂ. 2,000 ಹಣವನ್ನೂ ನೀಡಲಾಗಿತ್ತು ಎನ್ನಲಾಗಿದೆ. ಇದಲ್ಲದೆ, ಕಾರಾಗೃಹದಲ್ಲಿರುವ ಲಾಯ್ ವೇಗಸ್ ಎಂಬ ಬಂಧಿತನ ಮೊಬೈಲ್ ಸಂಖ್ಯೆಯನ್ನು ನೀಡಿ, ಆತನ ಸೂಚನೆಯಂತೆ ನಿಗದಿತ ಸ್ಥಳಕ್ಕೆ ಮಾದಕ ವಸ್ತುಗಳನ್ನು ಎಸೆಯಲಾಗಿದೆ ಎಂದು ಆರೋಪಿ ಬರ್ಕೆ ಪೊಲೀಸರ ವಿಚಾರಣೆ ವೇಳೆ ತಿಳಿಸಿದ್ದಾನೆ. ಈ ಸಂಬಂಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪ್ರಕರಣದ ಹಿಂದಿರುವ ಜಾಲದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!