ಮಂಗಳೂರು: ಕೊಲೆ, ದೊಂಬಿ ಪ್ರಕರಣದ ಆರೋಪಿಯನ್ನು ಸ್ಟ್ರೆಚರ್ನಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರನ್ನು ನ್ಯಾಯಾಧೀಶರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಅಡ್ಡೂರಿನ ಮಹಮ್ಮದ್ ಎಂಬಾತನ ಮೇಲೆ ಹಲವು ವರ್ಷಗಳ ಹಿಂದೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಅತನಿಗೆ ಕೋರ್ಟ್ಗೆ ಹಾಜರಾಗುವಂತೆ ವಾರಂಟ್ ಹೊರಡಿಸಲಾಗಿತ್ತು.
ಆದ್ರೆ ಆರೋಪಿ ಅಸೌಖ್ಯದಿಂದ ಹಾಸಿಗೆ ಹಿಡಿದಿದ್ದು ಕುಟುಂಬ ವರ್ಗದಿಂದ ದೂರವಾಗಿ ಅನಾಥವಾಗಿದ್ದ. ಇವರನ್ನು ಸಮಾಜ ಸೇವಕ ಆಸೀಫ್ ಎಂಬವರು ಅನಾಥಾಶ್ರಮಕ್ಕೆ ಕರೆದೊಯ್ದು ಚಿಕಿತ್ಸೆ ನೀಡಿದ್ದರು. ಮಹಮ್ಮದ್ನನ್ನು ಆ.12ರಂದು ಕೋರ್ಟ್ಗೆ ಹಾಜರುಪಡಿಸುವಂತೆ ಆಸೀಫ್ ಅವರಿಗೆ ಪೊಲೀಸರು ಒತ್ತಡ ಹೇರಿದ್ದರು.
ಇದನ್ನೂ ಓದಿ: ಬಂಟ್ವಾಳ: ಹಲವು ಪ್ರಕರಣಗಳಲ್ಲಿ ವಾರೆಂಟ್ ಆರೋಪಿಯನ್ನು ಬಂಧಿಸಿದ ಬಂಟ್ವಾಳ ಪೊಲೀಸರು
ಆರೋಪಿ ಮಹಮ್ಮದ್ನನ್ನು ಆಂಬುಲೆನ್ಸ್ನಲ್ಲಿ ಕೋರ್ಟ್ಗೆ ಕರೆದುಕೊಂಡು ಬಂದಿದ್ದಾರೆ. ಸ್ಟ್ರೆಚರ್ನಲ್ಲೇ ಮಲಗಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ಆರೋಪಿ ಪರಿಸ್ಥಿತಿ ಪರಿಗಣಿಸಿದ ನ್ಯಾಯಾಧೀಶರು ಆತನನ್ನು ಈ ಸ್ಥಿತಿಯಲ್ಲಿ ಕೋರ್ಟ್ ಮುಂದೆ ಹಾಜರುಪಡಿಸುವ ಅಗತ್ಯವೇನಿತ್ತು? ಎಂದು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.