ಬಂಟ್ವಾಳ: ಮಾಣಿ ಗ್ರಾಮ ಪಂ ವ್ಯಾಪ್ತಿಯ ವಿವಿಧ ಕಾಮಗಾರಿಗಳ ಶಿಲಾನ್ಯಾಸ ಮತ್ತು ಉದ್ಘಾಟನೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ನೆರವೇರಿಸಿದರು. ಈ ವೇಳೆ ಮಾತನಾಡಿದ ಶಾಸಕರು ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಯ ಮೂಲಕ ಮತದಾರರಿಗೆ ಧನ್ಯವಾದ ಹೇಳುವುದೇ ನಮ್ಮ ಧ್ಯೇಯ ವಾಕ್ಯ ಎಂದರು.
ತಾಲೂಕಿನ ಜನರು ವಿಶ್ವಾಸವಿರಿಸಿ ನೀಡಿದ ಮತಕ್ಕೆ ಚ್ಯುತಿ ಬಾರದಂತೆ ಪ್ರತಿ ಗ್ರಾಮಗಳನ್ನು ಅಭಿವೃದ್ಧಿ ಪಡಿಸುವುದೇ ನನ್ನ ಕನಸು. ಅಭಿವೃದ್ಧಿ ವಿಚಾರಗಳು ಬಂದಾಗ ಎಲ್ಲರೂ ಒಂದಾಗಿ ಕೈ ಜೋಡಿಸಿ. ಪ್ರಧಾನಿ ನರೇಂದ್ರ ಮೋದಿಯವರ ಚಿಂತನೆ ಹಾಗೂ ಆಡಳಿತ ಇತರ ದೇಶಗಳಿಗೆ ಮಾದರಿ ಯಾಗಿದ್ದು ಅವರು ಗುಣಗಾನ ಮಾಡುವಂತಾಗಿದೆ. ಕೋವಿಡ್ ವ್ಯಾಕ್ಸಿನ್ ನ ಮೂಲಕ ಇತರ ದೇಶಗಳಿಗೆ ನಾವು ದೊಡ್ಡಣ್ಣ ನಾಗಿ ಮೂಡಿಬಂದಿದ್ದೇವೆ. ಅಂತಹ ದೇಶದಲ್ಲಿರುವ ನಾವು ಭಾಗ್ಯಶಾಲಿಗಳು ಎಂದು ಅವರು ಹೇಳಿದರು.
ಮಾಣಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜಗೇರಿಸುವಂತೆ ಜಿ.ಪಂ.ಸದಸ್ಯೆ ಮಂಜುಳಾ ಮಾದವ ಮಾವೆ ಅವರ ನೀಡಿದ ಮನವಿಗೆ ಸ್ಪಂದಿಸಿದ ಶಾಸಕ ರಾಜೇಶ್ ನಾಯ್ಕ್ ಅವರು ಈಗಾಗಲೇ ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರ ವನ್ನು ಮೇಲ್ದರ್ಜೆಗೆ ಏರಿಸುವ ಪ್ರಕ್ರಿಯೆ ನಡೆಯುತ್ತಿದೆ, ಮುಂದಿನ ದಿನಗಳಲ್ಲಿ ಮಾಣಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ಮೂಲಕ ಜನರ ಉಪಯೋಗಕ್ಕೆ ಸಿಗುವಂತೆ ಮಾಡುವ ಭರವಸೆ ನೀಡಿದರು.
ಮಾಣಿ ಗಾಂಧಿ ಮೈದಾನದಲ್ಲಿ ರೂ 10 ಲಕ್ಷ ಜಿ.ಪಂ.ಅನುದಾನದ ಮೂಲಕ ನಿರ್ಮಾಣ ಮಾಡಿರುವ ರಂಗ ಮಂದಿರವನ್ನು ಉದ್ಘಾಟಿಸಿದ ಜಿ.ಪಂ.ಸದಸ್ಯೆ ಮಂಜುಳ ಮಾದವ ಮಾವೆ ಅವರು ಮಾತನಾಡಿ ಜಿ.ಪಂ. ಸದಸ್ಯೆಯಾಗಿ ಆಯ್ಕೆಯಾದ ಸಂದರ್ಭದಲ್ಲಿ ಈ ಭಾಗದ ಜನರ ಬೇಡಿಕೆಯಂತೆ ರಂಗ ಮಂದಿರ ನಿರ್ಮಾಣ ಮಾಡಿದ್ದೇನೆ. ಈ ರಂಗ ಮಂದಿರ ಹಾಗೂ ಮಾಣಿ ಸಂತೆ ಮಾರುಕಟ್ಟೆ ಸಮೀಪದಲ್ಲಿ ನಿರ್ಮಾಣವಾದ ಶೌಚಾಲಯವನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ಹೋಗುವ ಜವಬ್ದಾರಿ ಇಲ್ಲಿನ ಜನತೆಗಿದೆ ಎಂದರು.
ರೂ 10 ಲಕ್ಷ ವೆಚ್ಚದಲ್ಲಿ ಶಂಭುಗ -ಪಲ್ಲತ್ತಿಲ ರಸ್ತೆ ಕಾಂಕ್ರೀಟುಕರಣ, ರೂ 10 ಲಕ್ಷ ವೆಚ್ಚದಲ್ಲಿ ಮಾಣಿ -ಪಟ್ಲಕೋಡಿ, ರೂ 10 ಲಕ್ಷ ವೆಚ್ಚದಲ್ಲಿ ಮಾಣಿ-ಅರಿಯಕೋಡಿ, ರೂ. 6 ಲಕ್ಷ ವೆಚ್ಷದಲ್ಲಿ ಮಾಣಿ- ಕಾಪಿಕಾಡು, ರೂ 5 ಲಕ್ಷ ವೆಚ್ಚದಲ್ಲಿ ಕೊಡಾಜೆ -ಕೋಚಪಲ್ಕೆ, ರೂ.10 ಲಕ್ಷದಲ್ಲಿ ಗಾಂಧಿಮೈದಾನದ ರಂಗಮ0ದಿರ ಹಾಗೂ ರೂ 4 ಲಕ್ಷ ವೆಚ್ಚದಲ್ಲಿ ಸಂತೆ ಮಾರುಕಟ್ಟೆ ಯಲ್ಲಿ ಶೌಚಾಲಯದ ಉದ್ಘಾಟನೆ ನಡೆಯಿತು.
ತಾ.ಪಂ.ಸದಸ್ಯೆ ಗೀತಾಚಂದ್ರಶೇಖರ್, ನೆಟ್ಲಮೂಡ್ನೂರು ಗ್ರಾ.ಪಂ .ಅಧ್ಯಕ್ಷ ಸತೀಶ್ ನೇರಳಕಟ್ಟೆ, ಉಪಾಧ್ಯಕ್ಷೆ ಶಕೀಲಾ, ಅಶೋಕ್, ಮಾಣಿ ಗ್ರಾ.ಪಂ.ಸದಸ್ಯ ನಾರಾಯಣ ಶೆಟ್ಟಿ ದೋಟ, ಮಿತ್ರಾಕ್ಷಿ, ನೇರಳಕಟ್ಟೆ ವಿ.ಎಸ್.ಎಸ್.ಬ್ಯಾಂಕ್ ಅಧ್ಯಕ್ಷ ಪುಷ್ಪರಾಜ ಚೌಟ, ಬ್ಯಾಂಕ್ ನಿರ್ದೇಶಕ ತನಿಯಪ್ಪ ಗೌಡ, ಸನತ್ ಕುಮಾರ್ ರೈ, ಪ್ರಮುಖರಾದ ಗಣೇಶ್ ರೈ ಮಾಣಿ, ಭರತ್ ಕುಮಾರ್ ಶೆಟ್ಟಿ, ಪ್ರತಾಪ್ ಚಂದ್ರ ಆಳ್ವ, ಹರೀಶ್ ಮಾಣಿ, ಅಶೋಕ್, ವನಿತಾ, ರೂಪರಾಣಿ ಶೆಟ್ಟಿ, ಸುನೀತಾ, ವನಿತಾಕರುಣಾಕರ್, ಆನಂದ ಕುಲಾಲ್, ಸುಶೀಲಾ, ಸಂತೋಷ್ ರೈ ಮಾಣಿ, ಮುತ್ತಪ್ಪ, ಕರುಣಾಕರ ಪೂಜಾರಿ, ನರಸಿಂಹ ಶೆಟ್ಟಿ ಮಾಣಿ ಮತ್ತಿತರ ರು ಉಪಸ್ಥಿತರಿದ್ದರು.