ಮಾಣಿ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ ಎಸ್ಸೆಸ್ಸೆಫ್ ಸೂರಿಕುಮೇರು ಯುನಿಟ್ ಇದರ ವತಿಯಿಂದ 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಸೂರಿಕುಮೇರು ಸಂಜರಿ ಕಾಂಪ್ಲೆಕ್ಸ್ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್ವೈಎಸ್ ಮಾಣಿ ಸೆಂಟರ್ ನಾಯಕ ಹಾಜಿ ಯೂಸುಫ್ ಸೂರಿಕುಮೇರು ಧ್ವಜಾರೋಹಣ ಮಾಡಿದರು, ಮುಈನುದ್ದೀನ್ ಮಾಣಿ ಸ್ವಾಗತಿಸಿದರು.
ಸಂದೇಶ ಭಾಷಣ ಮಾಡಿದ ಸಿರಾಜುಲ್ ಹುದಾ ಕುಟ್ಯಾಡಿ ಇದರ ವಿದ್ಯಾರ್ಥಿ ಇಸಾಕ್ ಮಾಣಿ ಆಗಸ್ಟ್ 15 ಅಂದ್ರೆ ಇಡೀ ದೇಶದ ಜನರಿಗೆ ಸಂತಸ ತುಂಬಿರೋ ದಿನ ತ್ರಿವರ್ಣ ಪತಾಕೆಯನ್ನು ಹಾರಿಸೋ ಸಡಗರ ಸಂಭ್ರಮ ನಿಜ ಹೇಳಬೇಕೆಂದರೆ ಎಲ್ಲರ ಮನದಲ್ಲೂ ಸಂತೋಷ ಆದರೆ ಅದು ಕೇವಲ ಆಗಸ್ಟ್ 15 ಕ್ಕೆ ಮಾತ್ರ ಸೀಮಿತವಾಯಿತೇ? ಯಾಕಾಗಿ ಈ ರೀತಿ ಆಯಿತು?
ಉಳಿದ ತಿಂಗಳುಗಳಲ್ಲಿ ವಾರಗಳಲ್ಲಿ ದಿನದಲ್ಲಿ ಯಾಕೆ ಸ್ವಾತಂತ್ರ್ಯವಿಲ್ಲದೆ ಬದುಕುವಂತಾಯಿತು? ಒಂದು ದಿನ ಮಾತ್ರ ತ್ರಿವರ್ಣ ಪತಾಕೆ ಹಾರಿಸಿ, ಅದರ ಮಹತ್ವದ ಬಗ್ಗೆ ಮಾತಾಡಿ ಉಳಿದೆಲ್ಲಾ ದಿನದಲ್ಲಿ ಕೋಮುವಾದಿಯಾಗಿ, ಜಾತಿ, ಧರ್ಮ ಭೇದ ಭಾವಗಳನ್ನು ಮನಸ್ಸಲ್ಲಿಟ್ಟು ನಡೆಯುವ ನಮಗೆ ಸ್ವಾತಂತ್ರ್ಯ ಪೂರ್ಣವಾಯಿತೇ? ಸ್ವತಃ ದೇಶದಲ್ಲಿ ಹೊಂದಾಣಿಕೆ ಇಲ್ಲದಿದ್ದರೆ ಪರದೇಶಿಯರಿಗೆ ನಮ್ಮ ಮೇಲೆ ಆಕ್ರಮಣ ಮಾಡಲು ಯಾವುದೇ ಭಯವಿಲ್ಲ ಅಲ್ವಾ!
ಒಂದು ಹೆಣ್ಣು ಮಧ್ಯ ರಾತ್ರಿಯಲ್ಲಿ ಒಂಟಿಯಾಗಿ ಯಾವಾಗ ನಡೆಯುವುದಕ್ಕೆ ಸಾಧ್ಯವಾಗುತ್ತದೋ ಅಂದು ನಮಗೆ ಸ್ವಾತಂತ್ರ್ಯ ಲಭಿಸುವುದು ಎಂದು ಗಾಂಧಿ ತಾತ ಅಂದು ಹೇಳಿದ್ದರೆ, ಈ ಕಾಲದಲ್ಲಿ ಹಸಿ ಹಗಲು ಹೊತ್ತಿನಲ್ಲೇ ನಡೆದಾಡಲು ಹೆದರುವಂತಾಗಿಲ್ಲವೇ..?
ಎಲ್ಲಿ ನೋಡಿದರೂ ಅತ್ಯಾಚಾರ, ಅನಾಚಾರ ,ಅಕ್ರಮ,ಅನ್ಯಾಯ,ಕೊಲೆ,ದರೋಡೆ,ಇತ್ಯಾದಿ ರಾಜಾ ರೋಷವಾಗಿ ನಡೆಯುತ್ತಾ ಇದೆ. ಇಂತಹ ವಾತಾವರಣದಲ್ಲಿ ಇನ್ನು ಹೇಗೆ ತಲೆ ಎತ್ತಿ ನಡೆಯಲು ಸಾಧ್ಯ ಎಂದು ಭಾವಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಅದೆಷ್ಟೋ ಸಹೋದರಿಯರು. ಇದಕ್ಕೆ ಯಾರು ಹೊಣೆ?
ಪರಿಹಾರಕ್ಕಾಗಿ ನ್ಯಾಯಾಲಯ, ಆರಕ್ಷಕ ಠಾಣೆಗೆ ಧಾವಿಸಿದರೆ ಒಂದೆರಡು ಸಲ ಪರಿಗಣಿಸಿದರೂ ಲಂಚ ಕೊಟ್ರೆ ಕೇಸ್ ಮುಚ್ಚಿ ಸುಮ್ಮನಾಗುತ್ತಾರೆ ಎಂಬ ಭಾವನೆ ಜನರಿಂದ ದೂರವಾಗುವುದು ಯಾವಾಗ? ಇದು ಹಿಂದೂ ಕ್ರೈಸ್ತ ಮುಸಲ್ಮಾನ ಜೈನರ ಉದ್ಯಾನ ಎಂದು ನಾಡಗೀತೆಯಲ್ಲಿ ಹೇಳಿದ ಮಾತು ಬರೀ ನಾಡಗೀತೆಗೇ ಸೀಮಿತವಾಗಿ ಹೋಯಿತಲ್ಲವೇ? ಎಂದು ಮಾರ್ಮಿಕವಾಗಿ ನುಡಿದರು.
ಈ ಕಾರ್ಯಕ್ರಮದಲ್ಲಿ ಮುಬಶ್ಶಿರ್ ಸೂರಿಕುಮೇರು, ಮನೀರ್ ಮಾಣಿ,ಜಮಾಲ್,ಮಾಣಿ,ಲತೀಫ್ ಮಾಣಿ,ಅಬ್ದುಲ್ ಖಾದರ್ ಸೂರಿಕುಮೇರು,ಅಜ್ಮಲ್ ಮಾಣಿ ಮುಂತಾದವರು ಉಪಸ್ಥಿತರಿದ್ದರು,ಇಮ್ರಾನ್ ಸೂರಿಕುಮೇರು ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು.