ಬೆಂಗಳೂರು: ಕೊರೋನಾ ಅಬ್ಬರ ಹಿನ್ಬೆಲೆಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡ (ಎಸ್ಐಟಿ) ತನಿಖೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ವಾರದ ಹಿಂದೆಯೇ ಎಸ್ಐಟಿ ಮುಂದೆ ಜಾರಕಿಹೊಳಿಯವರು ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ, ಆರೋಗ್ಯ ಸಮಸ್ಯೆಯಿಂದಾಗಿ ಅವರು ವಿಚಾರಣೆಗೆ ಹಾಜರಾಗಿಲ್ಲ. ಎಲ್ಲಾ ಅಧಿಕಾರಿಗಳೂ ಕೂಡ ಕೊರೋನಾ ಕರ್ತವ್ಯದಲ್ಲಿ ಕಾರ್ಯ ಮಗ್ನರಾಗಿದ್ದಾರೆ.
ಎರಡು ವಾರಗಳ ಹಿಂದೆಯೇ ಕೊರೋನಾ ಸೋಂಕು ತಗುಲಿ, ಬಳಿಕ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೂ ರಮೇಶ್ ಜಾರಕಿಹೊಳಿಯವರೂ ವಿಚಾರಣೆಗೆ ಹಾಜರಾಗಿಲ್ಲ ಎಂದು ತಿಳಿದುಬಂದಿದೆ.
ಪ್ರಕರಣದ ಬಗ್ಗೆ ತನಿಖೆಗೆ ಹೆಚ್ಚಿನ ಕಾಲಾವಕಾಶ ಬೇಕಿದ್ದು, ಹೆಚ್ಚೆಚ್ಚು ಸಾಕ್ಷ್ಯಾಧಾರ, ದಾಖಲೆಗಳನ್ನು ಸಂಗ್ರಹಿಸಬೇಕಿದೆ. ಅಧಿಕಾರಿಗಳೂ ಕೂಡ ಈ ಪ್ರಕರಣದ ಬಗ್ಗೆ ಆಸಕ್ತಿ ತೋರುತ್ತಿಲ್ಲ. ಹೀಗಾಗಿ ತನಿಖೆ ಕ್ಲಿಷ್ಟಕರವಾಗಿದೆ. ಸರ್ಕಾರದ ಮೇಲೂ ಸಾಕಷ್ಟು ಒತ್ತಡಗಳಿವೆ ಎಂದು ಎಸ್ಐಟಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಇಬ್ಬರು ಶಂಕಿತ ವ್ಯಕ್ತಿಗಳನ್ನು ಹುಡುಕಲು ಎರಡು ತಂಡವನ್ನು ರಚನೆ ಮಾಡಲಾಗಿದೆ. ನರೇಶ್ ಗೌಡ ಹಾಗೂ ಶ್ರವಣ್ ಇಬ್ಬರೂ ಇನ್ನೂ ಪತ್ತೆಯಾಗಿಲ್ಲ. ಈ ಇಬ್ಬರನ್ನೂ ವಶಕ್ಕೆ ಪಡೆದ ನಂತರವಷ್ಟೇ ಮುಂದಿನ ತನಿಖೆ ಸುಲಭವಾಗಲಿದೆ.
ವಿಡಿಯೋದಲ್ಲಿ ಕಂಡು ಬಂದಿರುವ ಯುವತಿ ನ್ಯಾಯಾಲಯದ ಮುಂದೆ ಎಸ್ಐಟಿ ವಿರುದ್ಧವೇ ಸಾಕಷ್ಟು ಆರೋಪಗಳನ್ನು ಮಾಡಿದ್ದಾಳೆ. ಪ್ರಕರಣದ ತನಿಖೆ ಪ್ರಗತಿಯಲ್ಲಿರುವ ಪರಿಣಾಮ ನಾವು ಹೆಚ್ಚು ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.