ಪ್ರೀತಿ ವಿಚಾರಕ್ಕೆ ವಿದ್ಯಾರ್ಥಿಯನ್ನು ಅಪಹರಿಸಿದ ದುಷ್ಕರ್ಮಿಗಲು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ ಆಘಾತಕಾರಿ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ರಾಜರಾಜೇಶ್ವರಿ ನಗರದ ನಿವಾಸಿ ರಂಗನಾಥ್ ಮತ್ತು ಸತ್ಯಪ್ರೇಮ ದಂಪತಿಯ ಪುತ್ರ ಶಶಾಂಕ್ (18)ಕೊಲೆಗೆ ಯತ್ನ ನಡೆಯಲಾಗಿದೆ. ಸುಟ್ಟ ಗಾಯಗಳಿಂದ ಬಳಲುತ್ತಿರುವ ಶಶಾಂಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ನಗರದ ಖಾಸಗಿ ಕಾಲೇಜಿನಲ್ಲಿ ಯುವಕ ಸಿಎಸ್ ವಿದ್ಯಾಭ್ಯಾಸ ಮಾಡುತ್ತಿದ್ದು, ಸಂಬಂಧಿಕರ ಮಗಳನ್ನು ಪ್ರೀತಿಸುತಿದ್ದ. ಇದಕ್ಕೆ ಯುವತಿಯ ಪೋಷಕರ ವಿರೋಧವಿತ್ತು. ಶನಿವಾರ ಬೆಳಗ್ಗೆ 8 ಗಂಟೆಗೆ ಕಾಲೇಜ್ಗೆ ಶಶಾಂಕ್ ತಂದೆ ರಂಗನಾಥ್ ಡ್ರಾಪ್ ಮಾಡಿ ಹೋಗಿದ್ದರು. ಬಳಿಕ ತರಗತಿಗಳು ಇಲ್ಲದ ಕಾರಣ ಮನೆಗೆ ವಾಪಸ್ ಆಗುತ್ತಿದ್ದ. ಈ ವೇಳೆ ಆರ್ಆರ್ ನಗರ ಕಾಲೇಜ್ ಬಳಿ ಶಶಾಂಕ್ನನ್ನ ಅಡ್ಡಗಟ್ಟಿದ 6 ಜನರ ತಂಡ, ಬಾಯಿ ಹಾಗೂ ಕೈ ಕಾಲುಗಳಿಗೆ ಬಟ್ಟೆ ಕಟ್ಟಿ ಅಪಹರಿಸಿದೆ.
ಕಣಮಿಣಿಕೆ ಟೋಲ್ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಈ ದುಷ್ಕೃತ್ಯ ಎಸಗಿದ್ದಾರೆ. ನಂತರ ತಾನೇ ಬೆಂಕಿ ಆರಿಸಿಕೊಂಡು ಯುವಕ ಸ್ನೇಹಿತರಿಗೆ ಕರೆ ಮಾಡಿದ್ದು, ಸ್ಥಳಕ್ಕೆ ಬಂದ ಸ್ನೇಹಿತರು ಆತನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.
ಇತ್ತೀಚೆಗೆ ಮೈಸೂರಿನಿಂದ ಬೆಂಗಳೂರಿಗೆ ಬಂದಿದ್ದ ಯುವತಿಯನ್ನು ಶಶಾಂಕ್ ಮನೆಗೆ ಕರೆದುಕೊಂಡು ಹೋಗಿದ್ದ. ಇದರಿಂದ ಅಸಮಾಧಾನಗೊಂಡಿದ್ದ ಯುವತಿಯ ಪೋಷಕರು ಆತನ ಮನೆಗೆ ನುಗ್ಗಿ ಗಲಾಟೆ ಮಾಡಿದ್ದರು. ಇದಾದ ಬಳಿಕ ಯುವತಿಯ ವಿಚಾರದಿಂದ ದೂರ ಇರುತ್ತೇನೆ ಎಂದು ಶಶಾಂಕ್ ಹೇಳಿದ್ದ.
ಆರೋಪಿಗಳಾದ ಮನು ಹಾಗೂ ತಂಡದ ವಿರುದ್ಧ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.