ದ್ವೇಷದ ಹಿನ್ನಲೆ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಗಳಿಗೆ ಬೆಂಕಿ ಹಚ್ಚಿದ ಘಟನೆ ಬೆಂಗಳೂರು ಚಾಮುಂಡಿನಗರ ಬಳಿ ನಡೆದಿದೆ.
ಕಿರಾತಕರು ತಡರಾತ್ರಿ ವಿಜಯ್ ಎಂಬವರ ಮನೆ ಮುಂದೆ ನಿಲ್ಲಿಸಿದ್ದ ಬೈಕ್ಗಳಿಗೆ ಬೆಂಕಿ ಹಚ್ಚಿದ್ದಾರೆ. ಬಳಿಕ ಪರಾರಿಯಾಗಿದ್ದಾರೆ. ಬೆಂಕಿಗೆ ನಾಲ್ಕು ಬೈಕ್ ಗಳು ಸಂಪೂರ್ಣ ಸುಟ್ಟು ಭಸ್ಮವಾಗಿದೆ.
ತಡರಾತ್ರಿ ನಡೆದ ಈ ಬೆಂಕಿ ಅವಘಡಕ್ಕೆ ಜನ ಬೆಚ್ಚಿ ಬಿದ್ದಿದ್ದಾರೆ. ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಬೆಂಕಿ ಹಚ್ಚಿ ಓಡಿದ್ದಾರೆ. ಬೆಂಕಿಯ ತೀವ್ರತೆಗೆ ಬೈಕ್ ಸೇರಿದಂತೆ ಮನೆಯ ಕಿಟಕಿ, ಗೋಡೆಗೂ ಸಹ ಬೆಂಕಿ ತಗುಲಿದೆ. ಕೊಂಚ ಯಾಮಾರಿದ್ರೂ ಮತ್ತೊಂದು ಬೈಕ್, ಕಾರ್ ಬೆಂಕಿಗಾಹುತಿಯಾಗುತಿತ್ತು.
ಮನೆಯಲ್ಲಿ ವಿಜಯ್ ಕುಟುಂಬ ನಿದ್ರೆಗೆ ಜಾರಿತ್ತು. ಈ ವೇಳೆ ಬೆಂಕಿ ಕಂಡ ಕೂಡಲೇ ಹೊರಗಡೆ ಧಾವಿಸಿದ್ದಾರೆ. ಅಷ್ಟೊತ್ತಿಗಾಗಲೇ ಬೆಂಕಿಯ ತೀವ್ರತೆ ಹೆಚ್ಚಾಗಿದೆ. ಕೂಡಲೇ ಕುಟುಂಬದವರು ಅಕ್ಕಪಕ್ಕದವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರು ಹಾಗೂ ಒಂದು ಬೈಕ್ ಅನ್ನು ತೆಗೆಯಲು ಸಹಕರಿಸಿದ್ದಾರೆ.
ವಿಜಯ್ ಮನೆಯ ಗೋಡೆಗೂ ಬೆಂಕಿ ತಗುಲಿದೆ. ಪರಿಣಾಮ ಮನೆಯಲ್ಲಿದ್ದ ಎರಡು ಪಕ್ಷಿಗಳು ಬೆಂಕಿಗೆ ಬಲಿಯಾಗಿವೆ. ಮನೆಯ ಕಿಟಕಿ ಹಾಗೂ ಕೆಲ ವಸ್ತುಗಳು ಸುಟ್ಟು ಕರಕಲಾಗಿವೆ. ಜೆ.ಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.