



ಭಟ್ಕಳ: ಕುಮಟಾ ಪುರಸಭೆ ಅಧಿಕಾರಿಯಿಂದ ಮಾನಸಿಕ ಕಿರುಕುಳಕ್ಕೊಳಗಾದ ಯುವಕನೋರ್ವ ಕಾಣೆಯಾಗಿರುವ ಕುರಿತು ಭಟ್ಕಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.ಕೆಲಸದ ವೇಳೆ ಮಾನಸಿಕ ಕಿರುಕುಳ ಅನುಭವಿಸಿದ ನಗರದ ಕೋಟೆಶ್ವರ ಹರಿಜನಕೇರಿಯ ವೆಂಕಟೇಶ್ ರಮೇಶ್ ಹರಿಜನ (25) ಕಾಣೆಯಾದವರೆನ್ನಲಾಗಿದೆ.
ಈತ ಕುಮಟಾ ಪುರಸಭೆಯಲ್ಲಿ ಕೆಲಸ ಮಾಡುತ್ತಿದ್ದು ಅಲ್ಲಿ ಅಧಿಕಾರಿಗಳಿಂದ ಮಾನಸಿಕ ಕಿರುಕುಳ ಅನುಭವಿಸಲು ಸಾಧ್ಯವಿಲ್ಲದೇ ನಾನು ಮನೆಯಿಂದ ಹೋಗುತ್ತಿದ್ದೇನೆ ಎಂದು ಬರೆದಿಟ್ಟು ನಾಪತ್ತೆಯಾಗಿದ್ದಾನೆ.ಈ ಕುರಿತು ಆತನ ತಾಯಿ ಆಶಾ ರಮೇಶ ಹರಿಜನ ಅವರು ಭಟ್ಕಳ ನಗರ ಠಾಣೆಯಲ್ಲಿ ದೂರು ನೀಡಿದ್ದು ದೂರಿನಲ್ಲಿ ಕುಮಟಾ ಪುರಸಭೆಯಲ್ಲಿ ಕೆಲಸ ಮಾಡುತ್ತಿದ್ದ ನನ್ನ ಮಗನಿಗೆ ಅಲ್ಲಿನ ಪುರಸಭಾ ಮುಖ್ಯಾಧಿಕಾರಿಗಳಿಂದ ಕೆಲಸದ ವಿಚಾರದಲ್ಲಿ ನಿರಂತರವಾಗಿ ಮಾನಸಿಕ ಕಿರುಕುಳ ಉಂಟಾಗುತ್ತಿದ್ದು ಅದನ್ನೇ ಮನಸ್ಸಿಗೆ ಹಚ್ಚಿಕೊಂಡ ಅವನು ಆ.7ರ ಮಂಗಳವಾರ ಮನೆಯಲ್ಲಿ ಮಲಗಿದವನು ಮಧ್ಯರಾತ್ರಿಯೇ ಮನೆಯಿಂದ ಯಾರಿಗೂ ಹೇಳದೇ ಕಾಣೆಯಾಗಿದ್ದಾನೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಆತ ಅನುಭವಿಸಿದ ಮಾನಸಿಕ ಹಿಂಸೆಯ ಬಗ್ಗೆ ಪತ್ರವೊಂದನ್ನು ಬರೆದಿಟ್ಟಿರುವುದಾಗಿಯೂ ಅವರು ತಿಳಿಸಿದ್ದಾರೆ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯುವಕನ ಶೋಧ ಕಾರ್ಯ ಮುಂದುವರಿದಿದೆ.








