ಮನೆ ಮುಂದೆಯೇ ಯುವತಿ ಶವವಾಗಿ ಪತ್ತೆಯಾದ ಘಟನೆ ಬೆಂಗಳೂರಿನ ಮಹದೇವಪುರದ ಲಕ್ಷ್ಮಿಸಾಗರ ಲೇಔಟ್ನಲ್ಲಿ ನಡೆದಿದೆ. ಪ್ರಕರಣವನ್ನು ಭೇದಿಸಿದ ಪೊಲೀಸರು ಪಕ್ಕದ ಮನೆಯವನೇ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ.
ಶೆಲ್ ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡುತ್ತಿದ್ದ ಮಹಾನಂದಾ (21) ಎಂಬ ಗುಲ್ಬರ್ಗ ಮೂಲದ ಯುವತಿ ರಾತ್ರಿ ಪತ್ತೆಯಾಗಿದ್ದಳು.
ಈ ಕುರಿತು ಪೊಲೀಸರಿಗೆ ದೂರು ನೀಡಲಾಗಿತ್ತು. ಬೆಳಗ್ಗಿನ ಜಾವ ನಾಲ್ಕು ಗಂಟೆಗೆ ಮನೆ ಮುಂದೆಯೇ ಶವವಾಗಿ ಪತ್ತೆಯಾಗಿದ್ದಳು. ಘಟನಾ ಸ್ಥಳಕ್ಕೆ ಮಹದೇವಪುರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದರು.
ನೆರೆಮನೆ ನಿವಾಸಿಯಿಂದಲೇ ಮಹಾನಂದಾ ಕೊಲೆ ನಡೆದಿದೆ ಎಂಬುದು ಬಯಲಾಗಿದೆ. ಒಡಿಶಾ ಮೂಲದ ಕೃಷ್ಣ ಚಂದ ಸೇಟಿ ಎಂಬಾತನೇ ಈ ಕೃತ್ಯ ನಡೆಸಿದ ಪಾತಕಿ. ಟೆಕ್ ಪಾರ್ಕ್ನಲ್ಲಿ ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದ ಆರೋಪಿ ಕೃಷ್ಣ. ರಾತ್ರಿ ಸ್ಟವ್ ಮೇಲೆ ಅನ್ನ ಮಾಡಲು ಪಾತ್ರೆ ಇಟ್ಟಿದ್ದ ಯುವತಿ ಯಾವುದೋ ಕೆಲಸದ ಮೇಲೆ ಮನೆಯಿಂದ ಹೊರಗೆ ಬಂದಿದ್ದಳು. ಈ ವೇಳೆ ಪಕ್ಕದ ಮನೆಯ ಬಾಗಿಲ ಬಳಿ ಬರುತ್ತಿದ್ದಂತೆ ಕೃಷ್ಣ ಆಕೆಯನ್ನು ಮನೆ ಒಳಗೆ ಎಳೆದುಕೊಂಡಿದ್ದ.
ಬಳಿಕ ಯುವತಿ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿದ್ದ. ಆ ವೇಳೆ ವಿರೋಧ ವ್ಯಕ್ತಪಡಿಸಿದ ಯುವತಿಯ ಬಾಯಿ ಮೂಗು ಮುಚ್ಚಿಕೊಂಡಿದ್ದ. ಆಗ ಉಸಿರುಗಟ್ಟಿ ಯುವತಿ ಸಾವನ್ನಪ್ಪಿದ್ದಾಳೆ. ಕೊಲೆ ಬಳಿಕ ಮನೆಯ ಬೆಡ್ ಶೀಟ್ಲ್ಲಿ ಶವವನ್ನು ಸುತ್ತಿ ಮನೆಯ ಮೂಲೆಯೊಂದರಲ್ಲಿ ಇಟ್ಟಿದ್ದ. ರಾತ್ರಿ ಹನ್ನೆರಡು ಘಂಟೆ ಸುಮಾರಿಗೆ ಆರೋಪಿಯ ಪತ್ನಿ ಮನೆಗೆ ಬಂದಿದ್ದಾರೆ. ನಂತರ ಬೆಳಗಿನ ಜಾವ ಮನೆಯೊಳಗಿದ್ದ ಶವವನ್ನು ಮೃತಳ ಮನೆ ಮುಂದೆ ಹಾಕಿದ್ದ ಈ ಪಾತಕಿ. ಘಟನೆ ಬಳಿಕ ಏನೂ ತಿಳಿಯದಂತೆ ನಾಟಕವಾಡುತ್ತ ಬೆಳಗ್ಗೆ ಸಹ ಅಲ್ಲೇ ಇದ್ದ. ಸದ್ಯ ಪಾಪಿ ಕೃಷ್ಣ ಚಂದ ಸೇಟಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ಮಾಡುತ್ತಿದ್ದಾರೆ.