ಕಳ್ಳತನ ಆರೋಪದ ಮೇಲೆ ವ್ಯಕ್ತಿಯನ್ನು ಗುಂಪೊಂದು ಹೊಡೆದು ಕೊಂದ ಘಟನೆ ಉತ್ತರ ದೆಹಲಿಯ ಬುಧ್ ನಗರ ಪ್ರದೇಶದಲ್ಲಿ ನಡೆದಿದೆ. ಮೊಬೈಲ್ ಫೋನ್ ಕದ್ದಿದ್ದಾನೆ ಎಂದು ಆರೋಪಿಸಿ ಆತನ ಮೇಲೆ ಗುಂಪೊಂದು ದಾಳಿ ಮಾಡಿದೆ.
ಕೊಲೆಯಾದ ವ್ಯಕ್ತಿಯನ್ನು 26 ವರ್ಷದ ದೀಪು ಎಂದು ಗುರುತಿಸಲಾಗಿದೆ. ಉತ್ತರ ದೆಹಲಿಯ ಬುದ್ ನಗರ ಪ್ರದೇಶದಲ್ಲಿ ಜನವರಿ 12 ರಂದು ಪೊಲೀಸರಿಗೆ ಶವವೊಂದು ಪತ್ತೆಯಾಗಿದೆ. ತನಿಖೆ ಕೈಗೊಂಡ ಪೊಲೀಸರಿಗೆ ನಿಜಾಂಶ ತಿಳಿದುಬಂದಿದೆ. ಪೊಲೀಸರ ಮೂಲಗಳ ಪ್ರಕಾರ, ದೀಪು ಮೊಬೈಲ್ ಫೋನ್ ಕದಿಯುವ ಉದ್ದೇಶದಿಂದ ಗೋದಾಮಿನೊಳಗೆ ಪ್ರವೇಶಿಸಿದ್ದನು. ಗೋದಾಮಿನೊಳಗೆ ನುಸುಳಲು ಪ್ರಯತ್ನಿಸಿದ ದೀಪು, ಸ್ಥಳದಲ್ಲಿ ಮಲಗಿದ್ದ ಮೂವರು ವ್ಯಕ್ತಿಗಳಿಗೆ ಸಿಕ್ಕಿಬಿದ್ದಾಗ ಆತನನ್ನು ಬಂಧಿಸಿ ಥಳಿಸಲಾಗಿದೆ.
ಗೋದಾಮಿನೊಳಗಿದ್ದ ಮೂವರು ವ್ಯಕ್ತಿಗಳು ದೀಪುವನ್ನು ಹಿಡಿದ ನಂತರ ದೊಣ್ಣೆ ಮತ್ತು ಲಾಠಿಗಳಿಂದ ಥಳಿಸಲು ಪ್ರಾರಂಭಿಸಿದರು. ಗೋದಾಮಿನ ಮಾಲೀಕನೂ ಗುಂಪು ಹತ್ಯೆಯಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ದೀಪುಗೆ ಥಳಿಸಿದ ನಂತರ ಶವವನ್ನು ಬೀದಿಯಲ್ಲಿ ಎಸೆಯಲಾಯಿತು. ಎರಡು ದಿನಗಳ ನಂತರ ಶವ ಪತ್ತೆಯಾಗಿದೆ. ಇದೀಗ ದೀಪು ಅವರನ್ನು ಗುಂಪು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.