ಮೂಡಿಗೆರೆ: ತರಕಾರಿ ತರಲು ತೆರಳಿದ ಬುರ್ಖಾದಾರಿ ಮಹಿಳೆಗೆ ಗ್ರಾಮಲೆಕ್ಕಾಧಿಕಾರಿಯೋರ್ವ ಹಲ್ಲೆ ನಡೆಸಿ ಬಡ ಮಹಿಳೆಯ ಕೈ ಮುರಿದು ಹೋಗಿರುವ ಘಟನೆ ಮೂಡಿಗೆರೆಯಲ್ಲಿ ನಡೆದಿದೆ.
ಲಾಕ್ ಡೌನ್ ನಿಯಮಗಳ ಪ್ರಕಾರ 10ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದೆ. ಇದರಿಂದಾಗಿ 8ಗಂಟೆಗೆ ಶಬಾನಾ ಎನ್ನುವ ಮಹಿಳೆ ಮನೆಗೆ ತರಕಾರಿ ತರಲು ತೆರಳಿದ್ದರು. ಈ ವೇಳೆ ಗ್ರಾಮಲೆಕ್ಕಾಧಿಕಾರಿ ಗಿರೀಶ್ ಎಂಬಾತ ಲಾಠೀಯಿಂದ ಹೊಡೆದು ಕೈಮುರಿದಿದ್ದಾನೆ. ಮಹಿಳೆ ಮೇಲೆ ಹಲ್ಲೆ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ನೆಟ್ಟಿಗರು ವ್ಯಾಪಕವಾದಂತಹ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಮಹಿಳೆ ವಿಧವೆಯಾಗಿದ್ದು, ಮನೆ-ಮನೆಯಲ್ಲಿ ಪಾತ್ರೆ ತೊಳೆದು 4 ಮಕ್ಕಳನ್ನು ಸಾಕುತ್ತಿದ್ದರು. ಇದೀಗ ಮಹಿಳೆಯ ಕೈ ಮುರಿದಿದ್ದು ದುಡಿಯಲು ಸಾಧ್ಯವಾಗದಾಗಿದೆ. ಘಟನೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಎಸ್ ಡಿಪಿಐ ಖಂಡಿಸಿದೆ.
ಈ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆಯ ನೂರುಲ್ಲಾ ಖಾನ್ ಮಾತನಾಡಿ, ಗಿರೀಶ್ ಗೆ ಲಾಠೀ ಹಿಡಿಯಲು ಅನುಮತಿ ಕೊಟ್ಟವರು ಯಾರು? ಗಿರೀಶ್ ಓರ್ವ ಭ್ರಷ್ಠ, ಆತನ ಭ್ರಷ್ಟಾಚಾರದ ಬಗ್ಗೆ ದಾಖಲೆ ಇದೆ. ಶೀಘ್ರವಾಗಿ ಇದನ್ನು ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದಾರೆ.