ಶೃಂಗೇರಿ: ಸ್ವಂತ ತಾಯಿಯೇ ತನ್ನ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ 30ಕ್ಕೂ ಅಧಿಕ ಪುರುಷರಿಂದ ಅತ್ಯಾಚಾರ ನಡೆಸಿದ ಘಟನೆ ಪ್ರಕರಣವೊಂದರ ತನಿಖೆಯ ವೇಳೆ ಬೆಳಕಿಗೆ ಬಂದಿದ್ದು, ತಾಯಿ ತನ್ನನ್ನು ತಾನು ಈ ಬಾಲಕಿಯ ಚಿಕ್ಕಮ್ಮ ಎಂದು ಹೇಳಿಕೊಂಡಿದ್ದಳು. ಆದರೆ ಆಕೆಯೇ ಈ ಬಾಲಕಿಯ ತಾಯಿ ಎನ್ನುವುದು ಪತ್ತೆಯಾಗಿದೆ.
ಜನವರಿ 30 ರಂದು ದಾಖಲಾದ ಪ್ರಕರಣದ ಬೆನ್ನು ಹತ್ತಿದ್ದ ಎಎಸ್ಪಿ ಶೃತಿ ನೇತೃತ್ವದ ತಂಡ, ಈ ವರೆಗೆ ಪ್ರಕರಣ ಸಂಬಂಧ ತಾಯಿ ಗೀತಾ(43) ಸೇರಿ 32 ಜನರನ್ನು ಬಂಧಿಸಿದೆ. ತಾಯಿ ಸತ್ತ ಬಾಲಕಿಯನ್ನು ಓದಿಸುತ್ತೇನೆಂದು ಕರೆತಂದಿದ್ದ ಚಿಕ್ಕಮ್ಮನಿಂದ ಈ ಕೃತ್ಯ ನಡೆದಿದೆ ಎಂದು ಹೇಳಲಾಗಿತ್ತು. ಆದರೆ ಕಳೆದ ಒಂದೂವರೆ ತಿಂಗಳ ಸುದೀರ್ಘ ವಿಚಾರಣೆಯ ಬಳಿಕ ಹಣದಾಸೆಗೆ ಯುವತಿಯನ್ನು ವೇಶ್ಯೆ ವೃತ್ತಿಗೆ ತಳ್ಳಿದ್ದು ಆಕೆಯ ಚಿಕ್ಕಮ್ಮಳಲ್ಲ, ಹೆತ್ತ ತಾಯಿಯೇ ಎಂದು ತಿಳಿದು ಬಂದಿದೆ. ತನಿಖೆಯ ಮೊದಲು ಬಾಲಕಿಯ ಚಿಕ್ಕಮ್ಮ ಎಂದು ಮಹಿಳೆ ಹೇಳಿಕೊಂಡಿದ್ದಳು.
ಆದರೆ ತನಿಖೆ ವೇಳೆ ಬಾಲಕಿಯ ಚಿಕ್ಕಮ್ಮ ಅಲ್ಲ ಹೆತ್ತಮ್ಮ ಎಂಬುದು ಸಾಬೀತಾಗಿದೆ. ಉತ್ತರ ಕರ್ನಾಟಕದ ಮಹಿಳೆ ಶೃಂಗೇರಿಗೆ ಬಂದು ಮತ್ತೊಬ್ಬನ ಜೊತೆ ವಿವಾಹವಾಗಿದ್ದಳು. ತನ್ನ ಅಕ್ಕನ ಮಗಳು ಎಂದು ಹೇಳಿಕೊಂಡು ಬಾಲಕಿಯನ್ನು ಸಾಕುತ್ತಿದ್ದಳು. ಕೆಲ ವರ್ಷಗಳ ನಂತರ ಎರಡನೇ ಗಂಡನಿಂದಲೂ ದೂರವಾಗಿದ್ದ ಮಹಿಳೆ, ಶೃಂಗೇರಿಯಲ್ಲೇ ಬಾಲಕಿಯೊಂದಿಗೆ ಪ್ರತ್ಯೇಕವಾಗಿ ವಾಸವಾಗಿದ್ದಳು. ಈ ವೇಳೆ ಹಣದಾಸೆಗೆ ಪಾಪಿ ತಾಯಿ ತನ್ನ ಮಗಳನ್ನು ವೇಶ್ಯಾವೃತ್ತಿಗೆ ತಳ್ಳಿದ್ದಾಳೆ. ಮಗಳ ನಿರಂತರ ಅತ್ಯಾಚಾರಕ್ಕೆ ತಾಯಿಯೇ ಅವಕಾಶ ಮಾಡಿಕೊಟ್ಟಿದ್ದಳು. ಪ್ರಕರಣದ ಸಂಬಂಧ ಈವರೆಗೆ 32 ಆರೋಪಿಗಳನ್ನು ಬಂಧಿಸಲಾಗಿದೆ. ಹಣಕ್ಕಾಗಿ ಹೆತ್ತ ಮಗಳನ್ನೇ ತಾಯಿ ವೇಶ್ಯಾವಾಟಿಕೆಗೆ ತಳ್ಳಿದ ವಿಷಯ ಕೇಳಿ ಕಾಫಿನಾಡು ಕಂಗಾಲಾಗಿದ್ದು, ಕಠಿಣ ಶಿಕ್ಷೆ ನೀಡಬೇಕೆಂದು ಕಾಫಿನಾಡ ಜನತೆ ಆಗ್ರಹಿಸಿದ್ದಾರೆ.
2020ರ ಸೆ.1ರಿಂದ 2021ರ ಜನವರಿ 27ರವರೆಗೆ 30ಕ್ಕೂ ಅಧಿಕ ಮಂದಿ ತನ್ನ ಮೇಲೆ ಅತ್ಯಾಚಾರ ನಡೆಸಿದ್ದರು ಎಂದು 15 ವರ್ಷ ವಯಸ್ಸಿನ ಸಂತ್ರಸ್ತ ಬಾಲಕಿ ಪೊಲೀಸರಿಗೆ ದೂರಿನಲ್ಲಿ ತಿಳಿಸಿದ್ದರು. ಈ ಸಂಬಂಧ 32 ಮಂದಿಯನ್ನು ಪೊಲೀಸರು ಬಂಧಿಸಿದ್ದರು.
ಈ ಪ್ರಕರಣದ ತನಿಖೆಯ ವೇಳೆ ಸತ್ಯ ತಿಳಿದ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಬಾಲಕಿಯ ಸ್ವಂತ ತಾಯಿ, ತಾನು ಈಕೆಯ ಚಿಕ್ಕಮ್ಮ ಎಂದು ಹೇಳಿಕೊಂಡಿದ್ದಳು ಎನ್ನುವುದು ಬೆಳಕಿಗೆ ಬಂದಿದೆ. ಈ ಮಹಿಳೆಗೆ ಉತ್ತರ ಕರ್ನಾಟಕ ಜಿಲ್ಲೆಯೊಂದರಲ್ಲಿ ಮದುವೆ ಆಗಿದ್ದು ಮಗು ಜನಿಸಿದ್ದಳು. ಬಳಿಕ ಶೃಂಗೇರಿ ತಾಲೂಕಿನ ವ್ಯಕ್ತಿಯೊಬ್ಬರೊಂದಿಗೆ ವಿವಾಹವಾಗಿತ್ತು. ವಿವಾಹವಾದ ಕೆಲ ದಿನಗಳ ಬಳಿಕ ಆಕೆ ತನ್ನ ಮಗಳನ್ನು ಶೃಂಗೇರಿಗೆ ಕರೆಸಿಕೊಂಡು ತನ್ನ ಅಕ್ಕನ ಮಗಳು ಎಂದು ಹೇಳಿಕೊಂಡಿದ್ದಳು ಎಂದು ತಿಳಿದು ಬಂದಿದೆ.
ಎರಡು ಪತಿಯರಿಂದ ದೂರವಾಗಿದ್ದ ಪತ್ನಿ ತನ್ನ ಮಗಳನ್ನು ಅನೈತಿಕ ಚಟುವಟಿಕೆಗೆ ಎಳೆಯುವ ಉದ್ದೇಶದಿಂದ ಆಕೆಯ ಮೇಲೆ ಅತ್ಯಾಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾಳೆ ಎನ್ನುವುದು ಪೊಲೀಸರ ತನಿಖೆಯ ವೇಳೆ ಬೆಳಕಿಗೆ ಬಂದಿದೆ ಎನ್ನುವುದು ತಿಳಿದು ಬಂದಿದೆ. ಈ ಪ್ರಕರಣ ದೇಶಾದ್ಯಂತ ಸುದ್ದಿಯಾಗಿತ್ತು. ವಿಧಾನಸೌಧದಲ್ಲಿಯೂ ಈ ಬಗ್ಗೆ ವಿಪಕ್ಷಗಳು ಸರ್ಕಾರವನ್ನು ತರಾಟೆಗೆತ್ತಿಕೊಂಡಿದ್ದರು. ಇದೀಗ ಈ ಪ್ರಕರಣದ ಸತ್ಯವನ್ನು ಪೊಲೀಸರು ಬಯಲಿಗೆಳೆದಿದ್ದಾರೆ.