ಮೂಡುಬಿದ್ರೆ: ಕಾರಿನಲ್ಲಿ ಗೋಸಾಗಾಟ ಮಾಡುತ್ತಿದ್ದ ವೇಳೆ ಪೊಲೀಸರು ಫೈರಿಂಗ್ ಮಾಡಿದ ಘಟನೆ ಮೂಡುಬಿದ್ರೆಯಲ್ಲಿ ನಡೆದಿದೆ.
ಮೂಡುಬಿದ್ರೆಯ ಶಿರ್ತಾಡಿ ಬಳಿಯ ಔದಾಲ್ ಎಂಬಲ್ಲಿ ಗಸ್ತು ನಿರತರಾಗಿದ್ದ ವೇಳೆ ಕಾರು ಬಂದಿದ್ದು ನಿಲ್ಲಿಸಲು ಸೂಚನೆ ನೀಡಿದ್ದನ್ನು ಲೆಕ್ಕಿಸದೆ ಪೊಲೀಸ್ ಜೀಪಿಗೆ ಡಿಕ್ಕಿಯಾಗಲು ಯತ್ನ ಮಾಡಿದ್ದಾರೆ. ಈ ವೇಳೆ ಸಂಶಯಗೊಂಡು ರಿಡ್ಜ್ ಕಾರನ್ನು ಪೊಲೀಸರು ಬೆನ್ನಟ್ಟಿದ್ದಾರೆ. ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದಾಗ, ಪೊಲೀಸ್ ಇನ್ಸ್ ಪೆಕ್ಟರ್ ದಿನೇಶ್ ಕುಮಾರ್ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.
ಗುಂಡಿನ ಸದ್ದು ಕೇಳಿ ಭಯಗೊಂಡ ಆರೋಪಿಗಳು ಕಾರನ್ನು ರಸ್ತೆ ಬದಿ ಬಿಟ್ಟು ಪರಾರಿಯಾಗಿದ್ದಾರೆ. ಕಾರಿನಲ್ಲಿದ ಇಬ್ಬರು ಓಡಿ ಪರಾರಿಯಾಗಿದ್ದಾರೆ. ಕಾರು ಮತ್ತು ಅದರಲ್ಲಿದ್ದ ಆರು ದನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಿಡ್ಜ್ ಕಾರಿನಲ್ಲಿ ಆರು ದನಗಳನ್ನು ತುಂಬಿಸಿಕೊಂಡು ಮೂಡುಬಿದ್ರೆಯ ಕಡೆಗೆ ತರಲಾಗುತ್ತಿತ್ತು.
ಮಂಗಳೂರು ಕಮಿಷನರ್ ಸೂಚನೆ ಮೇರೆಗೆ ಈಗ ಪೊಲೀಸ್ ಠಾಣೆ ವ್ಯಾಪ್ತಿಯ ಆಯಕಟ್ಟಿನ ಜಾಗಗಳಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಇದನ್ನು ಅರಿಯದ ಗೋ ಕಳ್ಳರು ಪೊಲೀಸರು ಅಡ್ಡಗಟ್ಟಿದಾಗ ಬೇರೆ ದಾರಿ ಕಾಣದೆ ಪರಾರಿಯಾಗಲು ಯತ್ನಿಸಿದ್ದಾರೆ.