ನಮ್ಮ ಸೇನೆಗೆ ಮತ್ತಷ್ಟು ಬಲ ತುಂಬಲು ಭಾರತೀಯ ಸೇನೆ ತನ್ನ ಬತ್ತಳಿಕೆಗೆ ಶ್ವಾನಾಸ್ತ್ರ ಸೇರಿಸಿಕೊಳ್ಳೋಕೆ ಮುಂದಾಗಿದೆ. ಅದಕ್ಕೆ ಅಂತಲೇ ಭಾರತೀಯ ಸೇನೆ ಪ್ರಾಯೋಗಿಕವಾಗಿ ನಮ್ಮ ರಾಜ್ಯ ಮತ್ತು ತಮಿಳುನಾಡು ರಾಜ್ಯದ ಎರಡು ತಳಿಗಳ ಶ್ವಾನಗಳಿಗೆ ಟ್ರೈನಿಂಗ್ ನೀಡುತ್ತಿದೆ.
ನಮ್ಮದೇ ರಾಜ್ಯದ ಬಾಗಲಕೋಟೆ ಜಿಲ್ಲೆಯ ಮುಧೋಳ್ ತಳಿ ಶ್ವಾನಗಳು ಬೇಟೆಗೂ ಸೈ, ಗಡಿ ಕಾಯೋಕು ಜೈ. ಈ ಶ್ವಾನಗಳು ಅತಿ ಶೀಘ್ರದಲ್ಲೇ ಗಡಿಯಲ್ಲಿ ನಿಯೋಜನೆಗೊಳ್ಳಲಿವೆ. ಭಾರತಕ್ಕೆ ಕಂಟಕವಾಗಿರೋ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಚೀನಾ ಆಗಾಗ ಗಡಿಯಲ್ಲಿ ಕ್ಯಾತೆ ತೆಗೆಯುತ್ತಲೇ ಇವೆ..ಅಷ್ಟೆ ಅಲ್ಲ, ನೇರವಾಗಿ ಬಡಿದಾಡೋ ತಾಕತ್ತು ಇಲ್ಲದೆ ಗಡಿ ಮೂಲಕ ಉಗ್ರರನ್ನ ನುಸುಳಿಸುತ್ತಿವೆ. ಅದ್ರಲ್ಲೂ ಪಾಕಿಸ್ತಾನ ಸರ್ಕಾರ, ಉಗ್ರರಿಗೆ ಹಿಂಬಾಗಿಲ ಬೆಂಬಲ ಕೊಟ್ಟು ಭಾರತದಲ್ಲಿ ವಿದ್ವಂಸಕ ಕೃತ್ಯ ನಡೆಸೋಕೆ ನಕ್ಷೆ ಬರೆದುಕೊಡುತ್ತಿದೆ. ಗಡಿ ಕಾಯುತ್ತಿರೋ ಸೈನಿಕರ ಕಣ್ತಪ್ಪಿಸಿ ಉಗ್ರರು ದೇಶದೊಳಗೆ ನುಸುಳುತ್ತಿದ್ದಾರೆ. ಆದರೆ ಇನ್ನು ಮುಂದೆ ಅವರ ಆಟ ನಡೆಯೋದಿಲ್ಲ, ನೂರಾರು ಮೀಟರ್ ದೂರದಲ್ಲಿ ಸೇನೆ ಕಣ್ತಪ್ಪಿಸಿ ಉಗ್ರರು ನುಸುಳೋಕೆ ಯತ್ನಿಸಿದ್ರೆ ಮುಗೀತು. ಅವರ ಮೇಲೆ ಮುಗಿಬೀಳಲಿವೆ ಮುಧೋಳ್ ಶ್ವಾನಗಳು.
ನಿಯತ್ತಿನಲ್ಲಿ ಮನುಜರನ್ನು ಮೀರಿಸಿದ ಬಾಗಲಕೋಟ ಜಿಲ್ಲೆ ರನ್ನ ನಾಡಿನ ಹೆಮ್ಮೆಯ ಮುಧೋಳ ಶ್ವಾನಗಳು ಆಸ್ತಿ-ಪಾಸ್ತಿಗೆ ಕಾವಲಿಗಷ್ಟೇ ಸೀಮಿತವಾಗಿಲ್ಲ. ಇದೇ ಮೊದಲ ಬಾರಿಗೆ ಭಾರತೀಯ ಸೈನ್ಯ ಸೇರಿ ದೇಶ ಸಂರಕ್ಷಣೆಯ ಹೊಣೆ ಹೊರಲು ಸಜ್ಜಾಗಿವೆ. ಈಗಾಗಲೇ ಭಯೋತ್ಪಾದಕರ ಚಲನವಲನ, ಗೂಢಚರ್ಯೆಗಳನ್ನು ಪತ್ತೆ ಹಚ್ಚುವಲ್ಲಿ ಸೈನಿಕರಿಗೆ 8 ಶ್ವಾನಗಳ ಸಾಥ್ ಭಾರತೀಯ ಸೈನ್ಯಕ್ಕೆ ಶೀಘ್ರವೇ ಸಿಗಲಿದೆ.
ಯುಪಿಯ ಮೀರತ್ನ ಶಿಲ್ಲಾಂಗ್ನಲ್ಲಿರುವ ಭಾರತೀಯ ಸೇನೆಯ ರಿಮೌಂಟ್ ಮತ್ತು ವೆಟರ್ನರಿ ಕಾರ್ಫ್ಸ್ನಲ್ಲಿ ಮುಧೋಳ್ ಶ್ವಾನಗಳಿಗೆ ತರಬೇತಿ ನೀಡಲಾಗುತ್ತಿದೆ. ಶ್ವಾನಗಳಿಗೆ ಭಯೋತ್ಪಾದಕರ ಸುಳಿವು, ಶಸ್ತ್ರಾಸ್ತ್ರಗಳು, ಗೂಢಚರ್ಯೆ ಮತ್ತು ಡ್ರಗ್ಸ್ ಇಟ್ಟುಕೊಂಡಿದ್ದನ್ನು ಪತ್ತೆ ಹಚ್ಚುವ ಟ್ರೈನಿಂಗ್ ನೀಡಲಾಗುತ್ತಿದೆ. ಈ ಶ್ವಾನಗಳು ಉಗ್ರರ ಚಟುವಟಿಕೆಗಳ ಪತ್ತೆ ಕೆಲಸ ಮಾಡಲಿವೆ. ಉಳಿದ ಶ್ವಾನಗಳಿಗಿಂತ ಬೇಗ, ಬರೀ 40 ಸೆಕೆಂಡ್ನಲ್ಲಿ ಜಾಡು ಪತ್ತೆ ಹಚ್ಚುತ್ತವೆ. ಮೀರತ್ನಲ್ಲಿ 2015ರಿಂದ ತರಬೇತಿ ಪಡೆದಿರುವ 8 ಶ್ವಾನಗಳು ಸೈನಿಕರಿಗೆ ಎಲ್ಲ ಹಂತದಲ್ಲಿ ಸಾಥ್ ನೀಡುವ ತರಬೇತಿಯಲ್ಲಿ ಮೊದಲನೇ ಸ್ಥಾನ ಪಡೆದುಕೊಂಡಿವೆ.
ಇದೀಗ ದೇಶ ರಕ್ಷಣೆಯಂಥ ನಾಜೂಕಿನ ಕಾರ್ಯಕ್ಕೆ ಶ್ವಾನಗಳ ಬಳಕೆಗೆ ಸೈನ್ಯ ಮೊದಲ ಬಾರಿಗೆ ಮುಂದಾಗಿದೆ. ಕರ್ನಾಟಕ ರಾಜ್ಯದ ಮುಧೋಳ ತಳಿ ನಾಯಿ ಸೇನೆಯ ಕರ್ತವ್ಯಕ್ಕಾಗಿ ಮೀರತ್ನಲ್ಲಿ ತರಬೇತಿ ಪಡೆದ ಮೊದಲ ಭಾರತೀಯ ತಳಿ ಎಂಬುದು ಹೆಮ್ಮೆಯ ಸಂಗತಿ.
ತಮಿಳುನಾಡಿನ ರಾಜಪಾಳಯಂ ತಳಿ ಶ್ವಾನಗಳಿಗೂ ತರಬೇತಿ ನೀಡುತ್ತಿದ್ದು, ಈ ಎರಡೂ ಶ್ವಾನಗಳು ದೇಶದ್ರೋಹಿಗಳ ಎಡೆಮುರಿ ಕಟ್ಟೋ ಕಾರ್ಯದಲ್ಲಿ ನಿರತವಾಗಲಿವೆ. ಭೂಸೇನೆಗೆ ಮುಧೋಳ್ ಸೇರ್ಪಡೆಯಿಂದಾಗಿ ಮತ್ತಷ್ಟು ಬಲ ಬರುವುದರಲ್ಲಿ ಎರಡು ಮಾತಿಲ್ಲ.