ಮುಂಬೈ: ಬೃಹತ್ ಮುಂಬಯಿ ಮಹಾನಗರಪಾಲಿಕೆ ಮುಂಬೈನ ಬಂಗಲೆಯೊಂದರಲ್ಲಿ ನಟಿ ಕಂಗನಾ ರನೌತ್ ಅವರ ಕಚೇರಿಯನ್ನು ನೆಲಸಮಗೊಳಿಸಿರುವುದು ‘ಕಾನೂನಿನ ದುರುಪಯೋಗವಲ್ಲದೆ ಮತ್ತೇನಲ್ಲ’ ಎಂದು ಬಾಂಬೆ ಹೈಕೋರ್ಟ್ ಇಂದು ಹೇಳಿದೆ.
ಕಂಗನಾ ಬಂಗಲೆ ಧ್ವಂಸ ಪ್ರಕರಣದ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ಇದೊಂದು ದ್ವೇಷದ ನಡವಳಿಕೆಯೇ ಹೊರತು, ಕಾನೂನು ಸಮ್ಮತವಾದುದಲ್ಲ ಎಂದು ತಿಳಿಸಿದೆ. ಸೆಪ್ಟೆಂಬರ್ 9 ರಂದು ಮುಂಬೈನ ಪಾಲಿ ಹಿಲ್ ಬಂಗಲೆಯೊಂದರಲ್ಲಿ ಕಂಗನಾ ರನೌತ್ ಅವರ ಕಚೇರಿ, ನಿವಾಸ ಒಂದು ಭಾಗವನ್ನು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಅಥವಾ ಬಿಎಂಸಿ ನೆಲಸಮ ಮಾಡಿತ್ತು.
ಮಹಾರಾಷ್ಟ್ರ ಸರ್ಕಾರ ಮತ್ತು ಆಡಳಿತಾರೂಢ ಶಿವಸೇನಾ ವಿರುದ್ಧ ಅವರು ಮಾಡಿದ ಟೀಕೆಗಳ ಪರಿಣಾಮವಾಗಿ ನಾಗರಿಕ ಸಂಸ್ಥೆ ತನ್ನ ವಿರುದ್ಧದ ಕ್ರಮ ಎಂದು ಆರೋಪಿಸಿ ಕಂಗನಾ ಕೋರ್ಟ್ ಮೆಟ್ಟಿಲೇರಿದ್ದರು.
ನಟಿ ಕಂಗನಾ ರಣಾವತ್ ಅವರು ಅಕ್ರಮವಾಗಿ ಮನೆ ಕಟ್ಟಿರುವುದಾಗಿ ಬಿಎಂಸಿ ಆರೋಪಿಸಿತ್ತು. ಕಂಗನಾ ಅವರು ಸುಮಾರು 14 ನಿಯಮವನ್ನು ಉಲ್ಲಂಘಿಸಿರುವುದಾಗಿ ಬಿಎಂಸಿ ಪಟ್ಟಿ ಮಾಡಿತ್ತು. ಯಾವುದೇ ನಾಗರಿಕರ ವಿರುದ್ಧ ಬಲ ಪ್ರಯೋಗವನ್ನು ಅಧಿಕಾರಿಗಳು ಅನುಮೋದಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಕಂಗನಾ ರಾಜ್ಯದಿಂದ ಹೊರಗಿದ್ದ ವೇಳೆ ಕೇವಲ 24ಗಂಟೆಗಳ ಕಾಲಾವಧಿಯಲ್ಲಿ ಉತ್ತರ ನೀಡುವಂತೆ ಬಿಎಂಸಿ ಸೂಚಿಸಿತ್ತು . ಆದರೆ ಆಕೆಯ ಮನವಿಯನ್ನು ಪುರಸ್ಕರಿಸಿ ಹೆಚ್ಚಿನ ಸಮಯವನ್ನು ನೀಡದಿರುವುದನ್ನು ನ್ಯಾಯಾಲಯ ಗಮನಿಸಿದೆ ಎಂದು ಆದೇಶದಲ್ಲಿ ತಿಳಿಸಿದೆ.