ಮೈಸೂರು: ಮೈಸೂರು-ಮಂಗಳೂರು ನಡುವೆ ಶುಕ್ರವಾರದಿಂದ ವಿಮಾನ ಸಂಚಾರ ಪ್ರಾರಂಭಗೊಂಡಿದ್ದು, ಮೊದಲ ದಿನವೇ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ವಿಮಾನ ಸಂಚಾರಕ್ಕೆ ನಗರದ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸಂಸದ ಪ್ರತಾಪ್ ಸಿಂಹ ಹಸಿರು ನಿಶಾನೆ ತೋರಿದರು. ಮೈಸೂರಿನಿಂದ ಮಂಗಳೂರಿಗೆ 23 ಪ್ರಯಾಣಿಕರು ಪ್ರಯಣಿಸಿದರು. ಅದೇ ರೀತಿ ಮಂಗಳೂರಿನಿಂದ ಮೈಸೂರಿಗೆ 33 ಟಿಕೆಟ್ ಆಗಮಿಸಿದರು.
ಮಂಗಳೂರಿನಲ್ಲಿ ಬಂದರು ಇರುವ ಹಿನ್ನೆಲೆಯಲ್ಲಿ ವ್ಯಾಪಾರ ವಹಿವಾಟು ಹೆಚ್ಚಾಗಲು ವಿಮಾನ ಸಂಚಾರ ಸಹಕಾರಿಯಾಗಲಿದೆ. ಅಲ್ಲದೆ ಮಂಗಳೂರಿನ ನಿವಾಸಿಗಳು ಸಾಕಷ್ಟು ಸಂಖ್ಯೆಯಲ್ಲಿ ಮೈಸೂರಿನಲ್ಲಿ ನೆಲೆಸಿದ್ದು, ಮೈಸೂರು-ಮಂಗಳೂರು ನಡುವೆ ವಿಮಾನ ಸಂಚಾರ ಪ್ರಾರಂಭಿಸಬೇಕೆಂದು ಎಫ್’ಕೆಸಿಸಿಐ ಮಾಜಿ ಅಧ್ಯಕ್ಷ ಸುಧಾಕರ್ ಶೆಟ್ಟಿ ಹಾಗೂ ಇತರರು ಸಂಸದ ಪ್ರತಾಪ್ ಸಿಂಹ ಅವರಲ್ಲಿ ಮನವಿ ಮಾಡಿಕೊಂಡಿದ್ದರು. ಸಂಸದ ಪ್ರತಾಪ್ ಸಿಂಹ ಅವರ ವಿಶೇಷ ಪ್ರಯತ್ನದಿಂದ ಕೊನೆಗೂ ಮಂಗಳೂರು ಹಾಗೂ ಮೈಸೂರು ನಿವಾಸಿಗಳ ಪ್ರಮುಖ ಬೇಡಿಕೆ ಇದೀಗ ಈಡೇರಿದಂತಾಗಿದೆ.
ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾದ ಅಂಗ ಸಂಸ್ಥೆಯಾದ ಅಲಯನ್ಸ್ ಏರ್ ವಿಮಾನ ಸಂಚಾರ ಪ್ರಾರಂಭಿಸಿದೆ. ಸದ್ಯ ವಿಮಾನ ಸೇವೆ ಬುಧವಾರ, ಶುಕ್ರವಾರ, ಶನಿವಾರ, ಭಾನುವಾರ ದೊರೆಯಲಿದ್ದು, ಉತ್ತಮ ಸ್ಪಂದನೆ ದೊರೆತರೆ ವಾರದ ಎಲ್ಲ ದಿನವೂ ಸೇವೆ ವಿಸ್ತರಣೆಗೊಳ್ಳುವ ನಿರೀಕ್ಷೆ ಇದೆ.
ವಿಮಾನ ಮೈಸೂರಿನಿಂದ ಬೆಳಗ್ಗೆ 11.20ಕ್ಕೆ ಹೊರಟು ಮಂಗಳೂರಿಗೆ ಮಧ್ಯಾಹ್ನ 12.30ಕ್ಕೆ ತಲುಪಲಿದೆ. ಮಂಗಳೂರಿನಿಂದ ಮಧ್ಯಾಹ್ನ 12.55 ಹೊರಡುವ ವಿಮಾನ ಮೈಸೂರಿಗೆ ಮಧ್ಯಾಹ್ನ 1.55ಕ್ಕೆ ತಲುಪಲಿದೆ. ಮೈಸೂರಿನಲ್ಲಿ ಸುಮಾರು 60 ಸಾವಿರ ಮಂಗಳೂರಿನ ಜನರು ನೆಲೆಸಿದ್ದಾರೆ. ಇದುವರೆಗೆ ಮಂಗಳೂರಿಗೆ ತೆರಳಲು ಬಸ್ ಹಾಗೂ ರೈಲು ಮಾರ್ಗ ಇತ್ತು. ಬಸ್ ನಲ್ಲಿ ಪ್ರಯಣಿಸಲು 6 ಗಂಟೆ ಸಮಯ ಬೇಕಾಗಿದೆ. ಆದರೆ, ವಿಮಾನದಲ್ಲಿ ಕೇವಲ ಒಂದು ಗಂಟೆಗೆ ಮಂಗಳೂರು ತಲುಪಬಹುದು.
ವಿಮಾನ ಸಂಚಾರಕ್ಕೆ ಚಾಲನೆ ನೀಡುವ ಸಂದರ್ಭ ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕ ಮಂಜುನಾಥ್, ಶಾಸಕ ಜಿ.ಟಿ.ದೇವೇಗೌಡ, ಎಫ್’ಕೆಸಿಸಿಐ ಮಾಜಿ ಅಧ್ಯಕ್ಷ ಸುಧಾಕರ್ ಶೆಟ್ಟಿ, ಅಲಯನ್ಸ್ ಏರ್ ಸಿಇಒ ಅರ್ಪಿತ್ ಸಿಂಗ್, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ್ ಗೌಡ ಇತರರು ಇದ್ದರು