ಕೊಪ್ಪಳ: ಬೆಂಗಳೂರು ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣವು ಪೂರ್ವ ಯೋಜಿತ ಸಂಚು. ಈ ಬಗ್ಗೆ ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಹೇಳಿದರು.

ಕೊಪ್ಪಳದಲ್ಲಿ ಮಾತನಾಡಿದ ಕಟೀಲ್, ಗಲಭೆಗೆ ಟ್ವಿಟ್ ಕಾರಣವಾಗಿದೆ. ಟ್ವಿಟ್ ಮಾಡಿದ್ದಕ್ಕೆ ನನ್ನ ವಿರೋಧ ಇದೆ. ಟ್ವಿಟ್ ಮಾಡಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತದೆ. ಟ್ವಿಟ್ ಮಾಡಿದ್ದರ ನೆಪದಲ್ಲಿ ಗಲಭೆ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ ಎಂದರು.ಠಾಣೆ ಮುಂದೆ ಏಕಾಏಕಿ ಜನರು ಹೇಗೆ ಸೇರಿದರು? ಪೆಟ್ರೋಲ್ ಬಾಂಬ್ ಗಳು, ಕಲ್ಲುಗಳು ಎಲ್ಲಿಂದ ಬಂದವು? ಇವೆಲ್ಲ ಪೂರ್ವ ನಿಯೋಜಿತ ಸಂಚಾಗಿದೆ. ಗಲಭೆ ಹಿಂದೆ ಘಾತುಕ ಶಕ್ತಿಗಳಿವೆ.

ಈಗ ಯಡಿಯೂರಪ್ಪ ಅವರ ಸರಕಾರ ಅದ್ಭುತ ಕೆಲಸ ಮಾಡುತ್ತಿದೆ. ಅಭಿವೃದ್ಧಿ ಪರವಾದ ಕೆಲಸ ಮಾಡುತ್ತಿದೆ. ಅದನ್ನು ಸಹಿಸುತ್ತಿಲ್ಲ ಎಂದರು.ಗಲಭೆಯಲ್ಲಿ ಎಸ್ ಡಿಪಿಐ, ಕೆಎಫ್ ಡಿ ಸಂಘಟನೆಯ ಕೈವಾಡ ಇದೆ ಎನ್ನುವ ಮಾತುಗಳಿವೆ. ಇವುಗಳ ನಿಷೇಧಕ್ಕೆ ಒತ್ತಾಯ ಮಾಡುತ್ತೇನೆ. ಇದರ ಹಿಂದೆ ಯಾರಾರು ಇದ್ದಾರೆ ತನಿಖೆ ಆಗಬೇಕು. ಸರಕಾರ ದೃಢವಾದ ನಿರ್ಧಾರ ತೆಗೆದುಕೊಂಡಿದೆ. ಸರಕಾರಕ್ಕೆ, ಸಿಎಂ, ಗೃಹ ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇನೆ.









