ಕೊಡಗು: ಪ್ರವಾಸಕ್ಕೆಂದು ಕೇರಳದಿಂದ ಬಂದಿದ್ದ ಯುವಕನೊಬ್ಬ ಕೊಡಗು ಜಿಲ್ಲೆ ನಾಪೋಕ್ಲುವಿನ ಚೆಯ್ಯಂಡಾಣೆ ಸಮೀಪದ ಚೇಲವಾರ ಫಾಲ್ಸ್ನಲ್ಲಿ ನೀರುಪಾಲಾಗಿದ್ದಾನೆ.
ಮೃತ ಯುವಕನನ್ನು ಇರಿಟ್ಟಿಯ ರಾಶೀದ್ (25) ಎಂದು ಗುರುತಿಸಲಾಗಿದೆ.
ಚೆಯ್ಯಂಡಾಣೆ ಸಮೀಪದ ಚೇಲವಾರ ಫಾಲ್ಸ್ ನೋಡಬೇಕೆಂದು ಮೂವರು ಸ್ನೇಹಿತರೊಂದಿಗೆ ಕೇರಳದಿಂದ ಬಂದಿದ್ದ. ಈ ವೇಳೆ ಈಜಬೇಕೆಂದು ನೀರಿಗೆ ಇಳಿದಿದ್ದ. ಆದರೆ ಆಳ ತಿಳಿಯದೇ ನೀರಿಗೆ ಇಳಿದಿದ್ದರಿಂದ ಆತ ನೀರುಪಾಲಾಗಿದ್ದಾನೆ. ಈಜುವಾಗ ನೀರಿನ ಸೆಳೆತ ಅತಿಯಾಗಿದ್ದರಿಂದ ತನ್ನನ್ನು ರಕ್ಷಿಸಿಕೊಳ್ಳಲು ಆಗದೆ ಸೆಳೆತಕ್ಕೆ ಸಿಲುಕಿ ಸಾವನ್ನಪ್ಪಿದ್ದಾನೆ. ಅವನ ಸ್ನೇಹಿತರು ತಕ್ಷಣವೇ ಮಾಹಿತಿಯನ್ನು ಪೊಲೀಸರಿಗೆ ತಲುಪಿಸಿದ್ದಾರೆ.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಯೊಂದಿಗೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಸದ್ಯ ಅಗ್ನಿಶಾಮಕ ದಳ ಸಿಬ್ಬಂದಿ ಶೋಧ ಕಾರ್ಯ ನಡೆಸಿ ಯುವಕನ ಮೃತದೇಹವನ್ನು ಮೇಲಕ್ಕೆ ತೆಗೆದಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ನಾಪೋಕ್ಲು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಾಯ ಇದೆ ಎಂದು ಬರುವ ಪ್ರವಾಸಿಗರಿಗೆ ಹೇಳುತ್ತಿದ್ದರೂ ನಮ್ಮ ಮಾತನ್ನು ಕೇಳದೇ ಅವರು ನೀರಿಗೆ ಇಳಿಯುತ್ತಿದ್ದಾರೆ ಎಂದು ಸ್ಥಳೀಯರು ಪೊಲೀಸರಿಗೆ ಹೇಳಿದ್ದಾರೆ.