ನೆಲ್ಯಾಡಿ: ಕ್ಷುಲ್ಲಕ ಕಾರಣಕ್ಕೆ ಪತ್ನಿ ಮತ್ತು ಆಕೆಯ ಚಿಕ್ಕಮ್ಮನ ಮೇಲೆ ಆಸಿಡ್ ದಾಳಿ ನಡೆಸಿರುವ ಅಮಾನವೀಯ ಘಟನೆ ಕೊಣಾಲು ಗ್ರಾಮದ ಪಾಂಡಿಬೆಟ್ಟು ಎಂಬಲ್ಲಿ ಸೆ.24ರಂದು ಮುಂಜಾನೆ ನಡೆದಿದೆ.
ಬಿಜು ಹಾಗೂ ಆತನ ಪತ್ನಿ ಶೈನಿ ನಡುವೆ ಕಲಹ ಏರ್ಪಟಿದ್ದು ಈ ಹಿನ್ನೆಲೆಯಲ್ಲಿ ಶೈನಿ ಕೊಣಾಲು ಗ್ರಾಮದ ಪಾಂಡಿಬೆಟ್ಟು ಎಂಬಲ್ಲಿರುವ ತನ್ನ ತಂದೆಯ ತಮ್ಮನ ಮನೆಯಲ್ಲಿ ಮಗಳ ಜೊತೆಗೆ ವಾಸವಾಗಿದ್ದರು. ಅಲ್ಲಿಂದ ಶೈನಿಯವರು ತನ್ನ ಚಿಕ್ಕಮ್ಮ ಝಾನ್ಸಿಯವರ ಜೊತೆಗೆ ನೆಲ್ಯಾಡಿಯ ಆಶ್ರಮವೊಂದಕ್ಕೆ ಕೆಲಸಕ್ಕೆ ಹೋಗುತ್ತಿದ್ದರು. ಎಂದಿನಂತೆ ಸೆ.೨೪ರಂದು ಬೆಳಿಗ್ಗೆ ೬ ಗಂಟೆಯ ವೇಳೆಗೆ ಶೈನಿ ಹಾಗೂ ಝಾನ್ಸಿಯವರು ಮನೆಯಿಂದ ಕೆಲಸಕ್ಕೆ ಹೋಗಲೆಂದು ಕಾಲುದಾರಿಯಲ್ಲಿ ನಡೆದುಕೊಂಡು ಬರುತ್ತಿದ್ದ ವೇಳೆ ಕಾದು ಕುಳಿತಿದ್ದ ಆರೋಪಿ ಬಿಜು ಇಬ್ಬರ ಮೇಲೂ ಆಸಿಡ್ ದಾಳಿ ನಡೆಸಿ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.
ಸುದ್ದಿ ತಿಳಿಯುತ್ತಲೇ ಶೈನಿಯವರ ಚಿಕ್ಕಪ್ಪ ಏಲಿಯಸ್ರವರು ಸ್ಥಳಕ್ಕೆ ಆಗಮಿಸಿದ್ದು ಇಬ್ಬರನ್ನೂ ರಿಕ್ಷಾದಲ್ಲಿ ನೆಲ್ಯಾಡಿಯ ಆಸ್ಪತ್ರೆಯೊಂದಕ್ಕೆ ಕರೆತಂದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿದೆ ಎಂದು ವರದಿಯಾಗಿದೆ. ಆಸಿಡ್ ದಾಳಿಯಿಂದಾಗಿ ಇಬ್ಬರ ಮುಖ ಹಾಗೂ ದೇಹದಲ್ಲಿ ಸುಟ್ಟ ಗಾಯವಾಗಿದೆ ಎಂದು ವರದಿಯಾಗಿದೆ.