ಪುತ್ತೂರು(ಅ.29): ನಿನ್ನೆ ಪುತ್ತೂರಿನ ಆರ್ಯಾಪು ಗ್ರಾಮದ ಸಂಪ್ಯದಲ್ಲಿ ಯುವತಿಯೊಬ್ಬಳು ಕೆರೆಗೆ ಬಿದ್ದು ಸಾವಿಗೀಡಾಗಿದ್ದರು.ತನಿಖೆಯ ಬಳಿಕ ಇದು ಆತ್ಮಹತ್ಯೆ ಎಂದು ತಿಳಿದು ಬಂದಿದೆ.ವಿವಾಹಿತ ನೀಡುತ್ತಿದ್ದ ಮಾನಸಿಕ ಕಿರುಕುಳ ಹಾಗೂ ಜೀವ ಬೆದರಿಕೆಯಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದು ಎಂದು ಯುವತಿಯು ಡೈರಿಯಲ್ಲಿ ಬರೆದುಕೊಂಡದ್ದು ಬಹಿರಂಗ ಪಡಿಸಿದೆ.
ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಮಧುಶ್ರೀ(26) ಕೆರೆಗೆ ಹಾರಿ ನಿನ್ನೆ ಮಧ್ಯಾಹ್ನ ಆತ್ಮಹತ್ಯೆಗೆ ಶರಣಾಗಿದ್ದರು.
ಸಂಪಾಜೆ ಗ್ರಾಮದ ಬಂಗ್ಲೆಗುಡ್ಡೆ ಬಾಲಕೃಷ್ಣ ಗೌಡರ ಪುತ್ರಿಯಾದ ಮಧುಶ್ರೀ, ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ರಿಸ್ಪೆಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ನಿನ್ನೆ ಮಧ್ಯಾಹ್ನ ಸಂಪ್ಯದ ಕೊಲ್ಯದಲ್ಲಿರುವ ತನ್ನ ಅಜ್ಜಿ ಮನೆಗೆ ಬಂದಿದ್ದ ಮಧುಶ್ರೀ ಊಟವಾದ ಬಳಿಕ ತೋಟಕ್ಕೆ ಹೋಗಿ, ಕೆರೆಗೆ ಹಾರಿದ್ದಾರೆ. ನಾಲ್ಕು ವರ್ಷದ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಮಧುಶ್ರೀ, ರಾತ್ರಿ ಆಸ್ಪತ್ರೆಯ ಹಾಸ್ಟೆಲ್ ನಲ್ಲಿ ತಂಗುತ್ತಿದ್ದರು. ರಜಾ ದಿನಗಳಲ್ಲಿ ಅಜ್ಜಿ ಮನೆಗೆ ಬರುತ್ತಿದ್ದರು. ಮಂಗಳವಾರ ಸಂಜೆಯವರೆಗೆ ಕರ್ತವ್ಯ ನಿರ್ವಹಿಸಿ ಬಳಿಕ ಹಾಸ್ಟೆಲ್ ನಲ್ಲಿ ತಂಗಿದ್ದ ಮಧುಶ್ರೀ ನಿನ್ನೆ ಮಧ್ಯಾಹ್ನ ಅಜ್ಜಿ ಮನೆಗೆ ಬಂದಿದ್ದರು. ಹಾಗೇ ಬಂದವರು ಊಟ ಮಾಡಿ ಎಲ್ಲರೊಂದಿಗೂ ಮಾತನಾಡಿಕೊಂಡಿದ್ದರು.ಬಳಿಕ ಮನೆಯವರು ಮಧ್ಯಾಹ್ನ ಮಲಗಿದ್ದರು. ಎದ್ದು ನೋಡುವಾಗ ಆಕೆ ಕಾಣದ್ದನ್ನು ಕಂಡು ಹುಡುಕಿದಾಗ ಅಜ್ಜಿ ಮನೆಯ ಸಮೀಪದ ಚೋಮಣ್ಣ ಎಂಬವರ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ.
ಮಧುಶ್ರೀ ಆತ್ಮಹತ್ಯೆಗೆ ವಿವಾಹಿತನೊಬ್ಬ ನೀಡುತ್ತಿದ್ದ ಕಿರುಕುಳವೇ ಕಾರಣ ಎನ್ನಲಾಗಿದೆ. ಈ ಬಗ್ಗೆ ಮಧುಶ್ರೀ ತನ್ನ ಬ್ಯಾಗ್ ನಲ್ಲಿದ್ದ ಡೈರಿಯಲ್ಲಿ ಬರೆದುಕೊಂಡಿದ್ದಾರೆ. ನಾನು ಹಾಗೂ ಸಂಪಾಜೆಯ ದೇವಿಚರಣ್ ಕಳೆದ 5 ವರ್ಷಗಳಿಂದ ಪ್ರೀತಿಸುತ್ತಿದ್ದೆವು.ಆದರೆ ಕಳೆದ ಜೂನ್ ನಲ್ಲಿ ಆತನಿಗೆ ವಿವಾಹವಾಗಿತ್ತು. ಹೀಗಿದ್ದರೂ ಆತ ನನ್ನ ಜೊತೆ ಸಂಪರ್ಕದಲ್ಲಿದ್ದ. ನನಗೆ ಬೇರೆಯವರನ್ನು ಮದುವೆಯಾಗದಂತೆ ಒತ್ತಾಯಿಸುತ್ತಿದ್ದ.
ಒಂದು ವೇಳೆ ಮದುವೆಯಾದರೆ ಕೊಲೆ ಮಾಡೋದಾಗಿ ಬೆದರಿಕೆ ಹಾಕುತ್ತಿದ್ದ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಆತನ ಕಿರುಕುಳದ ಬಗ್ಗೆ ಮಧುಶ್ರೀ ಮನೆಯವರ ಬಳಿ ಕೂಡ ಹೇಳಿಕೊಂಡಿದ್ದರು.