ನವದೆಹಲಿ: ಹೊಸ ಸಂಸತ್ ಭವನ ನಿರ್ಮಾಣಕ್ಕೆ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅಡಿಗಲ್ಲು ಹಾಕಲಿದ್ದಾರೆ. ದೆಹಲಿಯ ಇಂಡಿಯಾ ಗೇಟ್ ಬಳಿ ಸಂಟ್ರಲ್ ವಿಸ್ತಾದಲ್ಲಿ ಶಂಕುಸ್ಥಾಪನೆ ನೆರವೇರಲಿದೆ.
ನೂತನ ಕಟ್ಟಡ ನಿರ್ಮಾಣ ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದು. ಅದರ ವಿಚಾರಣೆ ಬಾಕಿ ಇದೆ. ಹೀಗಾಗಿ ಸುಪ್ರೀಂಕೋರ್ಟ್ ಆದೇಶದಂತೆ ಇಂದು ನೂತನ ಸಂಸತ್ ಕಟ್ಟಡಕ್ಕೆ ಅಡಿಗಲ್ಲು ಮಾತ್ರ ಹಾಕಬಹುದಾಗಿದ್ದು, ನಿರ್ಮಾಣ ಕಾರ್ಯವನ್ನ ಶುರು ಮಾಡುವಂತಿಲ್ಲ.
ಇಂದು ಮಧ್ಯಾಹ್ನ 12.55ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ಮಧ್ಯಾಹ್ನ 1ಕ್ಕೆ ಭೂಮಿಪೂಜೆ ಹಾಗೂ ಅಡಿಗಲ್ಲು ಹಾಕುವ ಕಾರ್ಯ ನಡೆಯಲಿದೆ. 2.15ಕ್ಕೆ ಪ್ರಧಾನಿ ಮೋದಿ ಜನರನ್ನುದ್ದೇಶಿಸಿ ಮಾತನಾಡಲಿದ್ದಾರೆ. 20 ಸಾವಿರ ಕೋಟಿ ರೂಪಾಯಿಯ ಸೆಂಟ್ರಲ್ ವಿಸ್ತಾ ಯೋಜನೆಯಡಿ ರಾಜ್ಪಥ್ನ ಉದ್ದಕ್ಕೂ ಇರುವ ಸರ್ಕಾರಿ ಕಟ್ಟಡಗಳ ನವೀಕರಣ ಹಾಗೂ ನಿರ್ಮಾಣ ನಡೆಯಲಿದೆ. ನೂತನ ಸಂಸತ್ ಭವನ ನಿರ್ಮಾಣ ಈ ಯೋಜನೆಯ ಪ್ರಮುಖ ಭಾಗವಾಗಿದೆ. ಸುಮಾರು 800-900 ಕೋಟಿ ರೂಪಾಯಿ ವೆಚ್ಚದಲ್ಲಿ ಟಾಟಾ ಪ್ರಾಜೆಕ್ಸ್ಟ್ ಲಿಮಿಟೆಡ್ ಕಟ್ಟಡದ ನಿರ್ಮಾಣ ಮಾಡಲಿದೆ.
ಈಗಿರುವ ಸಂಸತ್ಭವನ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿದ್ದು. 93 ವರ್ಷಗಳಷ್ಟು ಹಳೆಯದಾದ ಈ ಕಟ್ಟಡಕ್ಕೆ ಯಾವುದೇ ಧಕ್ಕೆಯಾಗದಂತೆ ನವೀಕರಣ ಮಾಡಲು ಸಾಧ್ಯವಾಗುವುದಿಲ್ಲ. ಆಧುನಿಕ ರೀತಿಯ ಸಂವಹನ, ಭದ್ರತೆ ಹಾಗೂ ಭೂಕಂಪನದಿಂದ ರಕ್ಷಿಸುವ ವ್ಯವಸ್ಥೆಗಳನ್ನ ಮಾಡಲು ಆಗುವುದಿಲ್ಲ. ಹೀಗಾಗಿ ಹೊಸ ಕಟ್ಟಡ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಹಳೇ ಸಂಸತ್ ಭವನ ದೇಶದ ಪುರಾತತ್ವ ಆಸ್ತಿಯಾಗಿದ್ದು. ಅದನ್ನು ಸಂರಕ್ಷಣೆ ಮಾಡಲಾಗುತ್ತದೆ ಅಂತ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮಾಹಿತಿ ನೀಡಿದ್ದರು.