ಬೆಂಗಳೂರು: ಅಕ್ರಮವಾಗಿ ಬಾಂಗ್ಲಾ ವಲಸಿಗರನ್ನು ಬೆಂಗಳೂರು ನಗರಕ್ಕೆ ಕರೆತರುತ್ತಿದ್ದ 11 ಜನರನ್ನು ಬಂಧಿಸಿ ತನಿಖೆ ನಡೆಸುತ್ತಿರುವ ಎನ್ಐಎ (NIA) ಅಧಿಕಾರಿಗಳಿಗೆ, ಸುಮಾರು 10 ಸಾವಿರಕ್ಕೂ ಅಧಿಕ ಮಂದಿ ಅಕ್ರಮವಾಗಿ ಬಂದಿರುವುದು ತಿಳಿದುಬಂದಿದೆ. ಹೀಗಾಗಿ ಬಂಧಿತರನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಎರಡು ದಿನಗಳ ಹಿಂದೆ ಬೆಂಗಳೂರು ಹಾಗೂ ಹೊರವಲಯದ ಹಲವು ಕಡೆಗಳಲ್ಲಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಮೇಲೆ ಎನ್ಐಎ ದಾಳಿ ಮಾಡಿತ್ತು. ಈ ವೇಳೆ ಅಕ್ರಮವಾಗಿ ನಗರಕ್ಕೆ ಕರೆತರುತ್ತಿದ್ದ 11 ಜನರನ್ನು ಅಧಿಕಾರಿಗಳು ಬಂಧಿಸಿ ಅಕ್ರಮ ವಲಸಿಗರ ಮಾಹಿತಿ ಕಲೆ ಹಾಕಿದ್ದರು.
ಇದುವರೆಗಿನ ತನಿಖೆ ವೇಳೆ ಸುಮಾರು 10 ಸಾವಿರಕ್ಕೂ ಅಧಿಕ ಜನ ಅಕ್ರಮವಾಗಿ ಬಂದಿರುವುದು ಬೆಳಕಿಗೆ ಬಂದಿದೆ. 11 ಜನರ ವಿಚಾರಣೆ ವೇಳೆ ಮಾಸ್ಟರ್ ಮೈಂಡ್ ಜಾಕಿರ್ ಹುಸೇನ್ ಹೆಸರನ್ನು ಆರೋಪಿಗಳು ಬಾಯಿಬಿಟ್ಟಿದ್ದಾರೆ. ಈತನ ಸೂಚನೆಯಂತೆ ಅನಧಿಕೃತವಾಗಿ ನಗರಕ್ಕೆ ಕರೆತರಲಾಗುತ್ತಿತ್ತು ಎಂದು ಹೇಳಿದ್ದಾರೆ. ಎನ್ಐಎ ದಾಳಿ ಆಗುವ ವೇಳೆ ಆರೋಪಿ ಜಾಕಿರ್ ಹುಸೇನ್ ಪರಾರಿಯಾಗಿದ್ದಾನೆ.
ಎನ್ಐಎ ದಾಳಿ ವೇಳೆ ಮತ್ತೊಂದು ಸ್ಫೋಟಕವಾದ ವಿಚಾರ ಬೆಳಕಿಗೆ ಬಂದಿದೆ. ಬಹುತೇಕ ಬಾಂಗ್ಲಾ ಪ್ರಜೆಗಳ ಬಳಿ ಆಧಾರ್ ಕಾರ್ಡ್ ಮತ್ತು ವೋಟರ್ ಐಡಿ ಪತ್ತೆಯಾಗಿದೆ. ಹೀಗಾಗಿ ಐಡಿ ಕಾರ್ಡ್ ಮಾಡಿಕೊಟ್ಟಿದ್ದು ಯಾರು ಎಂಬುದನ್ನು ತೀವ್ರ ವಿಚಾರಣೆ ನಡೆಸಲಾಗುತ್ತಿದೆ.
ಅಕ್ರಮವಾಗಿ ಬಾಂಗ್ಲಾ ವಲಸಿಗರನ್ನು ಕರೆತಂದು ಆರೋಪಿಗಳು ರಾಬರಿ, ಡಕಾಯತಿ ನಡೆಸಲು ಫ್ಲಾನ್ ಮಾಡಿದ್ದರು ಎಂಬ ಶಂಕೆ ವ್ಯಕ್ತವಾಗಿದೆ. ಕೆಲವರಿಗೆ ರಾಬರಿ ಡಕಾಯತಿಗಾಗಿ ತರಬೇತಿ ಕೂಡ ನೀಡಿದ್ದರು ಎನ್ನಲಾಗಿದೆ. ಇನ್ನೂ ಕೆಲವರನ್ನು ವೇಶ್ಯಾವಾಟಿಕೆಯಲ್ಲಿ ಸೇರಿಸಲು ಪ್ಲ್ಯಾನ್ ನಡೆದಿತ್ತು.
ಈ ಸಂಬಂಧ ಆರೋಪಿಗಳ ಪ್ಲ್ಯಾನ್ ಬಗ್ಗೆ ಮಾತ್ರ ಬಾಯಿಬಿಡುತ್ತಿರುವ ಆರೋಪಿಗಳು, ಮಾಡಿದವರ ಹೆಸರನ್ನು ಬಾಯಿ ಬಿಡುತ್ತಿಲ್ಲ ಎಂಬ ವಿಚಾರ ಮೂಲಗಳಿಂದ ತಿಳಿದುಬಂದಿದೆ. ಸದ್ಯ ಎನ್ಐಎ ಅಧಿಕಾರಿಗಳು 11 ಆರೋಪಿಗಳನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.