ಚೆನ್ನೈ: ವ್ಯಕ್ತಿಯೊಬ್ಬ ಪ್ರಧಾನಿ ನರೇಂದ್ರ ಮೋದಿಯವರನ್ನು ಕೊಲೆ ಮಾಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿಕೊಂಡಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಆರೋಪಿಯನ್ನು ಸತ್ಯ ಆನಂದಂ(43) ಎಂದು ಗುರುತಿಸಲಾಗಿದೆ. ಈತ ಆರ್ಯಂಕುಪ್ಪಂ ಗ್ರಾಮದ ನಿವಾಸಿ ಮತ್ತು ರಿಯಲ್ ಎಸ್ಟೇಟ್ ಉದ್ಯಮಿ ಎಂದು ಪೊಲೀಸರು ತಿಳಿಸಿದ್ದಾರೆ.
ಪುದುಚೇರಿಯ ಆರ್ಯಂಕುಪ್ಪಂ ಗ್ರಾಮದ ನಿವಾಸಿಯಾಗಿದ್ದ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ, ಯಾರಾದರೂ 5 ಕೋಟಿ ರೂ ಕೊಟ್ಟರೆ ಮೋದಿಯ ಕೊಲೆ ಮಾಡುವುದಾಗಿ ಘೋಷಣೆ ಮಾಡಿದ್ದ. ಈ ಪೋಸ್ಟ್ ನೋಡಿ ಕಾರು ಚಾಲಕನೋರ್ವ ಪೊಲೀಸರಿಗೆ ಮಾಹಿತಿ ನೀಡಿದ್ದ.
ಇತ್ತ ಸೋಶಿಯಲ್ ಮೀಡಿಯಾದಲ್ಲಿ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಅಲ್ಲದೆ ಖಾತೆಯ ಮೂಲ ಪರಿಶೀಲಿಸಿ ಆತನ ಜಾಡು ಪತ್ತೆ ಮಾಡಿ ಬಂಧಿಸಿದ್ದಾರೆ.
ಸದ್ಯ ಸತ್ಯ ಆನಂದಂ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 505 (1) ಮತ್ತು 505 (2) (ಸಾರ್ವಜನಿಕ ಕಿಡಿಗೇಡಿತನಗಳಿಗೆ ಕಾರಣವಾಗುವ ಹೇಳಿಕೆಗಳನ್ನು ನೀಡುವುದು ಮತ್ತು ವರ್ಗಗಳ ನಡುವೆ ದ್ವೇಷ, ಉತ್ತೇಜಿಸುವ ಹೇಳಿಕೆಗಳು) ಇದರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.