ಪ್ರಧಾನಿ ನರೇಂದ್ರ ಮೋದಿಯವರು ಜನವರಿ 5ರಂದು ಕೊಚ್ಚಿ-ಮಂಗಳೂರು ನ್ಯಾಚುರಲ್ ಗ್ಯಾಸ್ ಪೈಪ್ಲೈನ್ ಯೋಜನೆಗೆ ಚಾಲನೆ ನೀಡಲಿದ್ದಾರೆ. ಈ ಮೂಲಕ ಒನ್ ನೇಷನ್ ಒನ್ ಗ್ಯಾಸ್ ಗ್ರಿಡ್ ರಚನೆಯ ಪ್ರಮುಖ ಮೈಲುಗಲ್ಲು ಆಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಈ ಯೋಜನೆಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಅವರೊಂದಿಗೆ ಕರ್ನಾಟಕ ಹಾಗೂ ಕೇರಳ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಹಾಗೂ ಪಿಣರಾಯ್ ವಿಜಯನ್ ಭಾಗಿಯಾಗಲಿದ್ದಾರೆ.
ಈ ಯೋಜನೆಗಾಗಿ ಗೇಲ್ (ಇಂಡಿಯಾ) ಲಿಮಿಟೆಡ್ ಸಂಸ್ಥೆ 450 ಕಿ.ಮೀ ಉದ್ದದ ಪೈಪ್ಲೈನ್ ರಚಿಸಿದ್ದು, ದಿನಕ್ಕೆ 12 ಮಿಲಿಯನ್ ಮೆಟ್ರಿಕ್ ಸ್ಟ್ಯಾಂಡರ್ಡ್ ಕ್ಯೂಬಿಕ್ನಷ್ಟು ಗ್ಯಾಸ್ ಸಪ್ಲೈ ಮಾಡುವ ಸಾಮಥ್ಯ ಹೊಂದಿದೆ ಎನ್ನಲಾಗಿದೆ. ಈ ಯೋಜನೆಗೆ 3000 ಕೋಟಿ ಖರ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಪೈಪ್ಲೈನ್ ಎರ್ನಾಕುಲಂ, ತ್ರಿಸೂರ್, ಪಾಲಕ್ಕಾಡ್, ಮಲಪ್ಪುರಂ, ಕೊಳಿಕೋಡ್, ಕಣ್ಣೂರ್ ಮತ್ತು ಕಾಸರಗೋಡು ಮೂಲಕ ಹಾದುಹೋಗಲಿದೆ.