




ನವದೆಹಲಿ: ಅಂದು ಕುಟುಂಬದೊಂದಿಗೆ ಪ್ರವಾಸದಲ್ಲಿದ್ದ 26 ಜೀವಗಳನ್ನು ಬಲಿ ಪಡೆದ ಉಗ್ರರಿಗೆ ತಕ್ಕ ಪಾಠ ಕಲಿಸಿದ ʻಆಪರೇಷನ್ ಸಿಂಧೂರʼಕ್ಕೆ ಇಂದು ವರ್ಷ.
2025ರ ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್ನ ಬೈಸರನ್ ವ್ಯಾಲಿಯಲ್ಲಿ ಪ್ರವಾಸಿಗರು ಸುಂದರ ಕ್ಷಣಗಳನ್ನು ಕಳೆಯುತ್ತಿದ್ದರು. ಈ ವೇಳೆ ಏಕಾಏಕಿ ಉಗ್ರರು ಬಂದು ಅಲ್ಲಿದ್ದ ಜನರಿಗೆ ಧರ್ಮ, ಕಲಿಮಾ ಕೇಳಿ 26 ಹಿಂದೂಯೇತರರ ಮೇಲೆ ಗುಂಡಿನ ದಾಳಿ ನಡೆಸಿ, ರಕ್ತ ಹರಿಸಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ `ಆಪರೇಷನ್ ಸಿಂಧೂರʼ ಎಂಬ ಹೆಸರಿನಲ್ಲಿ ಮೇ 7, 8ರ ರಾತ್ರಿ ಪಾಕಿಸ್ತಾನದ ಮೇಲೆ ದಾಳಿ ನಡೆಸಿತ್ತು. ಕೇವಲ 23 ನಿಮಿಷಗಳ ಕಾಲ ನಡೆಸಿದ ದಾಳಿಯಲ್ಲಿ ಭಾರತೀಯ ಸೇನೆ ಪಾಕ್ನ 9 ಉಗ್ರನೆಲೆಗಳನ್ನು ಧ್ವಂಸಗೊಳಿಸಿತ್ತು.
ಪಾಕ್ ಉಗ್ರರು ನಡೆಸಿದ ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಮೊದಲು ಭಾರತ ರಾಜತಾಂತ್ರಿಕ ಸೇಡಿನ ಕ್ರಮ ಆರಂಭಿಸಿ, ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿದ ಭಾರತ, ಉಭಯ ದೇಶಗಳ ನಡುವಿನ ಅಟಾರಿ-ವಾಘಾ ಗಡಿ ಮುಚ್ಚುವಿಕೆಯಂತಹ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿತ್ತು. ಆದರೆ ಈ ಕ್ರಮಗಳು ಸಾಲದು ಎಂಬ ಕೂಗು ಭಾರತದಲ್ಲಿ ಎದ್ದಿತ್ತು. ಆಗ ಅದಕ್ಕೆ ಪ್ರತಿಯಾಗಿ ಭಾರತ ನಡೆಸಿದ ಅಚ್ಚರಿಯ ಕಾರ್ಯಾಚರಣೆಯೇ ʻಆಪರೇಷನ್ ಸಿಂಧೂರʼ.
ಕೆಲ ದಿನಗಳ ಕಾಲ ಭಾರತೀಯ ಸೇನೆ ದಾಳಿ ಮುಂದುವರೆಸಿತ್ತು. ಇದಕ್ಕೆ ಪ್ರತಿಯಾಗಿ ಪಾಕ್ ಕೂಡ ದಾಳಿ ನಡೆಸಿತ್ತು. ಈ ವೇಳೆ ಪಾಕಿಸ್ತಾನದಲ್ಲಿರುವ ದೇಗುಲ, ಗುರುದ್ವಾರಗಳೂ ಧ್ವಂಸವಾಗಿದ್ದವು. ಭಾರತ ನಡೆಸಿದ ಬ್ರಹ್ಮೋಸ್ ಕ್ಷಿಪಣಿ ದಾಳಿಯಲ್ಲಿ ಪಾಕ್ ಸೇನಾನೆಲೆಗಳು ನಾಶಗೊಂಡಿದ್ದವು. ಅದಾದ ಬಳಿಕ ಮೇ.10 ಕದನ ವಿರಾಮ ಘೋಷಿಸಲಾಯಿತು.
ಪಹಲ್ಗಾಮ್ ಉಗ್ರರ ನರಮೇಧದಲ್ಲಿ 26 ಭಾರತೀಯ ನಾರಿಯರ ಸಿಂಧೂರ ಅಳಿಸಿದ್ದಕ್ಕೆ ʻಆಪರೇಷನ್ ಸಿಂಧೂರʼದ ಮೂಲಕ ಭಾರತೀಯ ಸೇನೆ ಪಾಕಿಸ್ತಾನದ ಉಗ್ರನೆಲೆ ಮೇಲೆ ಸೇಡು ತೀರಿಸಿಕೊಳ್ಳಲು ರೋಚಕ ಕಾರ್ಯಾಚರಣೆ ನಡೆಸಿತ್ತು ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ.








