ಪೆರಾಬೆ: ಪೆರಾಬೆ ಗ್ರಾ.ಪಂ ವ್ಯಾಪ್ತಿಯ ಕುಂತೂರು ಸಮೀಪ ಅಪರಿಚಿತ ವ್ಯಕ್ತಿಯನ್ನು ಗಸ್ತಿನಲ್ಲಿದ್ದ ಪೊಲೀಸರು ವಿಚಾರಿಸಿ ವಶಕ್ಕೆ ಪಡೆದಿರುವ ಘಟನೆ ಕಡಬ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಿನ್ನೆ ತಡರಾತ್ರಿ 3:30ರ ಸುಮಾರಿಗೆ ಇಲ್ಲಿನ ಮಹಿಳಾ ಬಿ.ಎಡ್ ಕಾಲೇಜು ಕಟ್ಟಡದ ಬಳಿ ಕಾಲೇಜು ಮುಂಭಾಗದಿಂದ ವ್ಯಕ್ತಿಯೊಬ್ಬ ಓಡಿ ಹೋಗಿ ಬಳಿಕ ತನ್ನ ಮುಖವನ್ನು ಮರೆ ಮಾಚಲು ತಾನು ಧರಿಸಿದ್ದ ಟೀಶರ್ಟ್ ಅನ್ನು ತೆಗೆದು ಮುಖಕ್ಕೆ ಕಟ್ಟಿಕೊಂಡು ಕಾಲೇಜು ಕಟ್ಟಡದ ಹಿಂಬದಿ ಅಡಗಿ ಕುಳಿತುಕೊಳ್ಳಲು ಯತ್ನಿಸಿದ್ದನು.
ಈ ವೇಳೆ ಗಸ್ತಿನಲ್ಲಿದ್ದ ಎ.ಎಸ್.ಐ ಸುರೇಶ್ ಸಿ.ಟಿ ನೇತೃತ್ವದ ಪೊಲೀಸ್ ತಂಡ ಆತನನ್ನು ಟಾರ್ಚ್ ಲೈಟ್ನ ಬೆಳಕಿನ ಸಹಾಯದಿಂದ ಪತ್ತೆ ಹಚ್ಚಿದ್ದಾರೆ. ಬಳಿಕ ಆತನನ್ನು ವಿಚಾರಿಸಿದಾಗ ಮಂಗಳೂರು ಮರವೂರು ಗ್ರಾಮದ ಬಜ್ಪೆ ಶಿವ ಪೂಜಾರಿ ಎಂಬವರ ಪುತ್ರ ಶರತ್ ಪೂಜಾರಿ ಎಂದು ತಿಳಿದು ಬಂದಿದೆ. ಯಾವುದೋ ಕೃತ್ಯಕ್ಕೆ ಬಂದಿರುವ ಸಂಶಯದ ಹಿನ್ನೆಲೆಯಲ್ಲಿ ವಶಕ್ಕೆ ಪಡೆದ ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ ಎಂದು ತಿಳಿದುಬಂದಿದೆ.