ವಿಟ್ಲ: ಶ್ರೀ ಗೋಪಾಲಕೃಷ್ಣ ದೇವಸ್ಥಾನ ಪೆರುವಾಯಿ ಇದರ ಪುನಃ ಪ್ರತಿಷ್ಠಾ ವರ್ಧಂತಿ ಮತ್ತು ವರ್ಷಾವಧಿ ರಂಗಪೂಜೆಯು ಬಹಳ ವಿಜೃಂಭಣೆಯಿಂದ ನಡೆಯಿತು.
ಸಾಮೂಹಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಪ್ರಾರಂಭವಾಗಿ ಬಳಿಕ ಬ್ರಹ್ಮಶ್ರೀ ಕುಂಟುಕುಡೇಲು ರಘುರಾಮ ತಂತ್ರಿಗಳ ನೇತೃತ್ವದಲ್ಲಿ ಪಂಚಗವ್ಯಾದಿ ಸ್ಥಳಶುದ್ಧಿ, ಶ್ರೀ ಗಣಪತಿ ಹೋಮ, ಶ್ರೀ ನಾಗದೇವರಿಗೆ ತಂಬಿಲ ಸೇವೆ, ಶ್ರೀದೇವರಿಗೆ ಸಾನಿಧ್ಯ ಕಲಶಪೂಜೆ ಮತ್ತು ಮಹಾಪೂಜೆ ಮೊದಲಾದ ವೈದಿಕ ವಿಧಿ ವಿಧಾನಗಳು ಜರುಗಿತು.
ಬೆಳಗ್ಗೆ 8:00 ರಿಂದ ಶ್ರೀರಾಜರಾಜೇಶ್ವರಿ ಮಾತೃ ಮಂಡಳಿ ಪೆರುವಾಯಿ, ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ ಪೆರುವಾಯಿ, ಶ್ರೀ ಮೂಕಾಂಬಿಕಾ ಭಜನಾ ಮಂಡಳಿ ಬೆರಿಪದವು ಮತ್ತು ರವಿಬಳ್ಳಾಲ್ ಬಳಗ ಬೆರಿಪದವು ಇವರು ಭಜನಾ ಸೇವೆಯನ್ನು ನಡೆಸಿಕೊಟ್ಟರು. ಮಧ್ಯಾಹ್ನದ ಅನ್ನಪ್ರಸಾದದ ಬಳಿಕ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ “ಹರಿಭಕ್ತ ಸುಧನ್ವ” ಎಂಬ ಯಕ್ಷಗಾನ ತಾಳಮದ್ದಳೆಯು ನಡೆಯಿತು.
ಸಂಜೆ ಏಳ್ಕಾನ ರವಿರಾಜ್ ಇವರ ನೂತನ ಕುಣಿತ ಭಜನಾ ತಂಡವಾದ ಶ್ರೀ ರಾಜರಾಜೇಶ್ವರಿ ಕುಣಿತ ಭಜನಾ ತಂಡ ಪೆರುವಾಯಿ ಇವರು ಕುಣಿತ ಭಜನಾ ಸೇವೆಯನ್ನು ನಡೆಸಿಕೊಟ್ಟರು.
ದೀಪ ಪ್ರಜ್ವಲನೆಯೊಂದಿಗೆ ಪ್ರಾರಂಭಗೊಂಡ ಸಭಾ ಕಾರ್ಯಕ್ರಮದಲ್ಲಿ ಶ್ರೀಮತಿ ಸವಿತಾ ಎಸ್ ಭಟ್ ಅಡ್ವಾಯಿ ಪ್ರಾಸ್ತಾವಿಕ ನುಡಿಗಳನ್ನಾಡಿದರು . ಶ್ರೀ ಗುರುದೇವಾನಂದ ಸ್ವಾಮೀಜಿಯವರು ಪ್ರಸ್ತುತ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಮೌಲ್ಯಗಳ ಕುರಿತು ನೆರೆದಿರುವ ಭಕ್ತಾಭಿಮಾನಿಗಳಿಗೆ ತಮ್ಮ ಆಶೀರ್ವಚನದ ಮೂಲಕ ತಿಳಿಸಿ ಕೊಟ್ಟರು.
ಮನಃಶಾಸ್ತ್ರದಲ್ಲಿ ಫ್ರೆಂಚ್ ಯೂನಿವರ್ಸಿಟಿಯಿಂದ ಪಿ.ಎಚ್.ಡಿ ಪದವಿ ಪಡೆದು ಪೆರುವಾಯಿ ಗ್ರಾಮಕ್ಕೆ ಕೀರ್ತಿಯನ್ನು ತಂದುಕೊಟ್ಟ ಬಿ.ಜಿ.ಎಸ್ ಇಂಟರ್ನ್ಯಾಶನಲ್ ಅಕಾಡೆಮಿಕ್ಸ್ ಬೆಂಗಳೂರು ಇದರ ಪ್ರಾಂಶುಪಾಲರಾದ ಡಾ.ಮಧುಸೂದನ ಸುಣ್ಣಂಬಳ ಪೆರುವಾಯಿ ಮತ್ತು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪೆರುವಾಯಿ ಇದರ ಮುಖ್ಯಶಿಕ್ಷಕರಾಗಿ ಸುದೀರ್ಘವಾಗಿ ಸೇವೆ ಸಲ್ಲಿಸುತ್ತಿರುವ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶ್ರೀ ಕುಂಞ್ಞ ನಾಯ್ಕ ಎಂ ಇವರನ್ನು ಸನ್ಮಾನಿಸಲಾಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷರಾಗಿ ದಾಮೋದರ ರೈ ಪದವು ಕಲಾಯಿಗುತ್ತು ಮಂಗಳೂರು ಅಧ್ಯಕ್ಷೀಯ ಮಾತುಗಳನ್ನಾಡಿದರು. ಪ್ರಭಾಕರ ಶೆಟ್ಟಿ ಕಲೈತ್ತಿಮಾರು ನೆರೆದಿರುವ ಸರ್ವರನ್ನೂ ಸ್ವಾಗತಿಸಿದರು.ಮನೋಹರ್ ಶೆಟ್ಟಿ ಪೇರಡ್ಕ ಹಾಗೂ ಬಾಲಕೃಷ್ಣ ಪೂಜಾರಿ ಕಲ್ಲಡ್ಕ ಪೆರುವಾಯಿ ಇವರು ಸನ್ಮಾನ ಪತ್ರ ವಾಚಿಸಿದರು. ಮುರಳಿಪ್ರಸಾದ್ ಬೆರಿಪದವು ವಂದಿಸಿ, ಬಿ.ದಿನೇಶ್ ಪೆರುವಾಯಿ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಶ್ರೀ ಗೋಪಾಲಕೃಷ್ಣ ದೇವರಿಗೆ ರಂಗಪೂಜೆ, ರಾತ್ರಿಯ ಮಹಾಪೂಜೆ ಮತ್ತು ಪ್ರಸಾದ ವಿತರಣೆ ಜರುಗಿತು. ರಾತ್ರಿಯ ಅನ್ನಪ್ರಸಾದದ ನಂತರ ಶ್ರೀ ಬೆಂಕಿನಾಥೇಶ್ವರ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಕಳವಾರು ಬಾಳ, ಮಂಗಳೂರು ಇವರಿಂದ “ಶ್ರೀ ದೇವಿ ರಕ್ತೇಶ್ವರಿ ಮಹಾತ್ಮೆ” ಯಕ್ಷಗಾನ ಬಯಲಾಟ ನಡೆಯಿತು.