ತ್ರಿಶೂರ್: “ಲಾಕ್ಡೌನ್ ಸಂದರ್ಭದಲ್ಲಿ ಲಕ್ಷಾಂತರ ಬಡವರ ಹಸಿವು ನೀಗಿಸಿದ ಕೇರಳ ಸಿಎಂ ಪಿಣರಾಯಿ ವಿಜಯನ್ ದೇವರಿಗೆ ಸಮಾನ” ಎಂಬ ಪೋಸ್ಟರ್ವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಕೇರಳದ ಮಲಪ್ಪುರಂನಲ್ಲಿರುವ ವಿಷ್ಣು ದೇವಸ್ಥಾನದ ಆವರಣದಲ್ಲಿ ಸಿಎಂ ಪಿಣರಾಯಿ ವಿಜಯನ್ ಕುರಿತಾದ ಹೀಗೊಂದು ಪೋಸ್ಟರ್ ಹಾಕಿರುವುದು ಈಗ ಭಾರೀ ಚರ್ಚೆಯನ್ನು ಹುಟ್ಟಿ ಹಾಕಿದೆ.
ಸಿಎಂ ಪಿಣರಾಯಿ ವಿಜಯನ್ ಬಲಗೈ ಮುಷ್ಟಿ ಬಿಗಿ ಹಿಡಿದು, ತಾನೊಬ್ಬ ಕಮ್ಯುನಿಸ್ಟ್ ಹೋರಾಟಗಾರ ಎಂಬರ್ಥದಲ್ಲಿ ತೆಗೆಸಿರುವ ಫೋಟೋ ಬಳಸಿ ಮಾಡಿರುವ ಪೋಸ್ಟರ್ ಇದಾಗಿದೆ. ಪೋಸ್ಟರ್ನಲ್ಲಿ ದೇವರು ಎಲ್ಲಿದ್ದೀರಿ ಎಂದು ಕೇಳಿದ್ರಿ, ಇವರೇ ನಮ್ಮ ದೇವರು ಎಂಬ ಕ್ಯಾಪ್ಷನ್ ಕೂಡ ಪ್ರಿಂಟ್ ಮಾಡಲಾಗಿದೆ.
ಇನ್ನು, ಸಿಪಿಎಂ ಪಕ್ಷವೂ ಪಿಣರಾಯಿ ವಿಜಯನ್ ಫೋಟೋ ಸಂಬಂಧ ಪತ್ರಿಕಾ ಹೇಳಿಕೆ ನೀಡಿದೆ. ಈ ಕೃತ್ಯಕ್ಕೂ ನಮ್ಮ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಯಾರೋ ಪಿಣರಾಯಿ ವಿಜಯನ್ ಮೇಲಿನ ಅಭಿಮಾನದಿಂದ ಹೀಗೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಸೇರಿದಂತೆ ಇತರೆ ವಿರೋಧ ಪಕ್ಷಗಳ ಪಿಣರಾಯಿ ವಿಜಯನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೇಳೋದೊಂದು ಮಾಡೋದೊಂದು ಎಂದು ಸಿಪಿಎಂ ಸಿದ್ಧಾಂತದ ಬಗ್ಗೆ ಕುಟುಕಿದ್ದಾರೆ.