ಬಂಟ್ವಾಳ : ಅಕ್ರಮ ಜಾನುವಾರು ಸಾಗಾಟದ ಅಟೋ ರಿಕ್ಷಾವನ್ನು ಪೊಲೀಸರು ಬೆನ್ನಟ್ಟಿದಾಗ ಜಾನುವಾರನ್ನು ಅಟೋ ರಿಕ್ಷಾದಿಂದ ಕೆಳಗಿಳಿಸಿ ಆರೋಪಿಗಳು ಪರಾರಿಯಾದ ಘಟನೆ ಕಾರಿಂಜ ಬಳಿ ಮಂಗಳವಾರ ರಾತ್ರಿ ನಡೆದಿದೆ.
ಮಂಗಳವಾರ ರಾತ್ರಿ ಕಾರಿಂಜ ದರ್ಖಾಸು ಕಡೆಯಿಂದ ಬರ್ಕಟ ಕ್ರಾಸ್ ಕಡೆಗೆ ಅಟೋ ರಿಕ್ಷಾದಲ್ಲಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಪಿಎಸ್ಸೆ ಮೂರ್ತಿ ನೇತೃತ್ವದ ಪೊಲೀಸರು ಸ್ಥಳಕ್ಕೆ ಧಾವಿಸಿ ಅಟೋ ರಿಕ್ಷಾವನ್ನು ನಿಲ್ಲಿಸುವಂತೆ ಸೂಚಿಸಿದಾಗ ಅಟೋ ರಿಕ್ಷಾ ಚಾಲಕ ನಿಲ್ಲಿಸದೆ ಅತೀ ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾನೆ. ಈ ಸಂದರ್ಭ ಪೊಲೀಸರು ಬೆನ್ನಟ್ಟಿದಾಗ ಅಟೋ ರಿಕ್ಷಾ ಚಾಲಕ ರಿಕ್ಷಾದಲ್ಲಿದ್ದ ಜಾನುವಾರನ್ನು ರಿಕ್ಷಾದಿಂದ ಇಳಿಸಿ ಪರಾರಿಯಾಗಿದ್ದಾನೆ.
ಆರೋಪಿಗಳ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸಿದ್ದು, ಅಟೋ ರಿಕ್ಷಾ ಚಾಲಕ ಮಹಮ್ಮದ್ ಮುಸ್ತಫ ಹಾಗೂ ಅಟೋದಲ್ಲಿದ್ದ ಇನ್ನೋರ್ವ ವ್ಯಕ್ತಿ ಲಿಂಗಪ್ಪ ಎಂದು ತಿಳಿದು ಬಂದಿದೆ. ಜಾನುವಾರನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.