ಮಂಗಳೂರು; ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಮೇಲಂತಬೆಟ್ಟು ಗ್ರಾಮದ ಕಲ್ಲಗುಡ್ಡೆ ಸಮೀಪದ ಮನೆಯೊಂದರಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಗೆ ಬೆಳ್ತಂಗಡಿ ಪೊಲೀಸರು ದಾಳಿ ಮಾಡಿ, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಜನಾರ್ಧನ ಪೂಜಾರಿ (45), ಜನಾರ್ಧನ (40) ಹಾಗೂ ರಾಮಚಂದ್ರ ದೇವಾಡಿಗ (45) ಎಂದು ಗುರುತಿಸಲಾಗಿದೆ.
ಬೆಳ್ತಂಗಡಿ ತಾಲೂಕಿನ ಮೇಲಂತ ಬೆಟ್ಟು ಗ್ರಾಮದ ಕಲ್ಲಗುಡ್ಡೆ ಎಂಬಲ್ಲಿರುವ ರಾಮಚಂದ್ರ ದೇವಾಡಿಗ ಎಂಬವರು ಬಾಡಿಗೆಗೆ ಪಡೆದುಕೊಂಡಿರುವ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಬೆಳ್ತಂಗಡಿ ವೃತ್ತ ನಿರೀಕ್ಷಕರಾದ ಸಂದೇಶ್ ಅವರ ನೇತೃತ್ವದ ಪೊಲೀಸರ ತಂಡ ಬಂಟ್ವಾಳ ಉಪವಿಭಾಗ ಡಿವೈಎಸ್ಪಿ ಅವರಿಂದ ಸರ್ಚ್ ವಾರಂಟ್ ಪಡೆದು ದಾಳಿನಡೆಸಿ ವೇಶ್ಯಾವಾಟಿಕೆಯಲ್ಲಿ ನಿರತರಾಗಿದ್ದ ಆರೋಪಿಗಳಾದ ಜನಾರ್ಧನ ಪೂಜಾರಿ, ಜನಾರ್ಧನ ಮತ್ತು ವೇಶ್ಯಾವಾಟಿಕೆಗೆ ಅನುವು ಮಾಡಿಕೊಟ್ಟ ರಾಮಚಂದ್ರ ದೇವಾಡಿಗ ಅವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ದಾಳಿ ವೇಳೆ ನೊಂದ ಇಬ್ಬರು ಮಹಿಳೆಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣಾ ಅಕ್ರ:95/2020 ಕಲಂ: 3,4,5 (ಡಿ) ಐ.ಟಿ.ಪಿ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.