ವಿಟ್ಲ: ಪುಣಚ ಗ್ರಾಮ ಪಂಚಾಯಿತಿ ಸುಪರ್ದಿಯಲ್ಲಿರುವ ಪದವು ಕೊಪ್ಪಳ ಸಾರ್ವಜನಿಕ ರಸ್ತೆಯನ್ನು ಜಯಂತಿ ಹಾಗೂ ಬಬಿತ ಎಂಬವರು ಅತಿಕ್ರಮಿಸಿ ಬಲಬಂತವಾಗಿ ಬೇಲಿ ನಿರ್ಮಿಸಿ ರಸ್ತೆಯನ್ನು ಮುಚ್ಚಿ ಸಾರ್ವಜನಿಕರ ಸಂಚಾರವನ್ನು ನಿರ್ಬಂಧಿಸಿರುವುದರ ವಿರುದ್ಧ ದ. ಜಿಲ್ಲಾ ದಲಿತ್ ಸೇವಾ ಸಮಿತಿಯ ನೇತೃತ್ವದಲ್ಲಿ ಸೋಮವಾರ ಪುಣಚ ಗ್ರಾಮ ಪಂಚಾಯಿತಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ದಲಿತ್ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಸೇಸಪ್ಪ ಬಿ.ಕೆ ಬೆದ್ರಕಾಡು ಮಾತನಾಡಿ ಪಂಚಾಯಿತಿ ಅಧೀನದಲ್ಲಿರುವ ರಸ್ತೆಯನ್ನು ವೈಯಕ್ತಿಕವಾಗಿ ದುರುಪಯೋಗಪಡಿಸುತ್ತಿರುವುದು ಅನ್ಯಾಯವಾಗಿದೆ. ಕಂದಾಯ ಇಲಾಖೆ, ಪಂಚಾಯಿತಿ ಆಡಳಿತ ಮೌನ ವಹಿಸಿರುವುದು ಅತಿಕ್ರಮಣದಾರರೊಂದಿಗೆ ಶಾಮೀಲಾಗಿದ್ದಾರೆಂಬ ಸಂಶಯ ಮೂಡಿಸುತ್ತಿದೆ. ಕೂಡಲೇ ರಸ್ತೆ ಸರ್ವೇ ನಡೆಸಿ ಸಮಸ್ಯೆ ಇತ್ಯರ್ಥಗೊಳಿಸಬೇಕು. ತಪ್ಪಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಸಂಘಟನೆಯ ಗೌರವಾಧ್ಯಕ್ಷ ಸೋಮಪ್ಪ ನಾಯ್ಕ ಮಲ್ಯ ಮಾತನಾಡಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ವಿರುದ್ಧ ಘೋಷಣೆ ಕೂಗಲಾಯಿತು.
ಪಂಚಾಯಿತಿ ಪಿಡಿಒ ಲಾವಣ್ಯ ಪ್ರತಿಭಟನಕಾರರ ಬೇಡಿಕೆ, ಅಹವಾಲನ್ನು ಸ್ವೀಕರಿಸಿ, ತಹಸೀಲ್ದಾರರ ಸೂಚನೆಯಂತೆ ಈಗಾಗಲೇ ಸಂಬಂಧಿತ ಭೂಮಾಪನ ಇಲಾಖೆಗೆ ಪ್ರಸ್ತಾವಣೆ ಕಳುಹಿಸಿದ್ದು, ಅಧಿಕಾರಿಯನ್ನು ಖುದ್ದು ಭೇಟಿಯಾಗಿ ೧೦ ದಿನಗಳೊಳಗೆ ಸ್ಥಳ ಸರ್ವೇ ನಡೆಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಲಿಖಿತ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ದಲಿತ್ ಸೇವಾ ಸಮಿತಿಯ ಉಪಾಧ್ಯಕ್ಷ ಪ್ರಸಾದ್ ಬೊಳ್ಮಾರ್, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಯು., ಜಿಲ್ಲಾ ಸಮಿತಿಯ ಉಪಾಧ್ಯಕ್ಷೆ ಮೀನಾಕ್ಷಿ ನೆಲ್ಲಿಗುಡ್ಡೆ, ದಲಿತ್ ಸೇವಾ ಸಮಿತಿ ಸಂಚಾಲಕ ಸಂಚಾಲಕ ಗೋಪಾಲ ನೇರಳಕಟ್ಟೆ, ಕೆದಿಲ ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷ ಮಾರಪ್ಪ ಸುವರ್ಣ, ಪಾಣೆಮಂಗಳೂರು ಹೋಬಳಿ ದ.ಸೇ.ಸಮಿತಿ ಅಧ್ಯಕ್ಷ ನಾಗೇಶ್ ಮುಡಿಪು, ಬಂಟ್ವಾಳ ತಾಲೂಕು ಸಮಿತಿ ಪ್ರದಾನ ಕಾರ್ಯದರ್ಶಿ ಪ್ರಸಾದ್ ಅನಂತಾಡಿ, ಜಿಲ್ಲಾ ಸಮಿತಿ ಜತೆ ಕಾರ್ಯದರ್ಶಿ ಲಲಿತ ಸಾಲೆತ್ತೂರು, ಗೌರವ ಸಲಹೆಗಾರ ಕುಶಾಲಪ್ಪ ಮೂಡಂಬೈಲು, ರಸ್ತೆ ವಂಚಿತ ನಾಗರಿಕರು, ದಲಿತ್ ಸೇವಾ ಸಮಿತಿ ಸದಸ್ಯರು ಭಾಗವಹಿಸಿದ್ದರು.