ಪುತ್ತೂರು : ಪುತ್ತಿಲ ಪರಿವಾರದ ಸಮಾಲೋಚನಾ ಸಭೆಯು, ಬೃಹತ್ ಸಂಖ್ಯೆಯಲ್ಲಿ ಕಾರ್ಯಕರ್ತರು ಮತ್ತು ಬೆಂಬಲಿಗರೊಂದಿಗೆ ಇಂದು ಪುತ್ತೂರು ನಗರದ ಕೊಟೇಚಾ ಹಾಲ್ ನಲ್ಲಿ ನಡೆದಿದ್ದು ಮಹತ್ವದ ನಿರ್ಧಾರ ಪ್ರಕಟಪಡಿಸಿದ್ದಾರೆ.
ಬಿಜೆಪಿ ಜೊತೆ ಒಂದಾಗಲು ಸಿದ್ದರಿದ್ದು ಆದರೆ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ಮೋದಿಗಾಗಿ ಈ ಲೋಕಸಭಾ ಚುನಾವಣೆಯಲ್ಲಿ ಕೆಲಸ ಮಾಡಬೇಕೆಂಬ ಮನಸ್ಸಿದೆ. ನಾವು ಮುಹೂರ್ತ ಫಿಕ್ಸ್ ಮಾಡುತ್ತೇವೆ ಎಂದು ಶ್ರೀ ಕೃಷ್ಣ ಉಪಾಧ್ಯಾಯ ಹೇಳಿದ್ಧಾರೆ.
ಪುತ್ತಿಲ ಪರಿವಾರದ ಬೆಂಬಲಿಗರ ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರಿಗೆ ಗಡುವು ವಿಧಿಸಿದ್ದು, ಮೂರು ದಿನಗಳೊಳಗೆ ಎಲ್ಲವೂ ಸರಿಯಾಗುವಂತೆ ನೋಡಿಕೊಳ್ಳಿ. ಎಲ್ಲವೂ ಸರಿಯಾಗುವ ಶಕ್ತಿಯನ್ನು ಈ ತುಳುವ ಮಣ್ಣು ನೀಡಲಿ. ನೀವು ಸತಾಯಿಸುವುದು ಬೇಡ ನಾಲ್ಕು ಜನರನ್ನು ಸರಿ ಮಾಡಿ ಇಲ್ಲವಾದಲ್ಲಿ ಪುತ್ತಿಲ ಪರಿವಾರ ಸಾಮಾಜಿಕ ಸಂಘಟನೆಯಾಗಿ ಹುಟ್ಟಿದ್ದು ಹೌದಾದರೂ ಮುಂದೆ ರಾಜಕೀಯ ಕ್ಷೇತ್ರಕ್ಕೆ ಧುಮುಕಲು ಟೊಂಕಕಟ್ಟಿ ಕೊಳ್ಳುತ್ತೇವೆ ಎಂದು ಸಂಘಟನಾ ಸಂದೇಶ ರವಾನಿಸಿದ್ದಾರೆ.
ಅರುಣ್ ಪುತ್ತಿಲ ಬಿಜೆಪಿ ಸೇರ್ಪಡೆಗೆ ಪುತ್ತೂರು ಬಿಜೆಪಿಯ ಸ್ಥಾಪಿತ ಬೆರಳೆಣಿಕೆಯ ಜನರ ವಿರೋಧವಿದೆ. ನಾವು ಉಲ್ಲೇಖಿಸುವಂತೆ ಹಿಂದುತ್ವ ಆಗಬೇಕಾದರೆ ಎಲ್ಲಾ ಹಿತಾಸಕ್ತಿಗಳನ್ನು ಬದಿಗಿಟ್ಟು, ಅರುಣ್ ಕುಮಾರ್ ಪುತ್ತಿಲ ಅವರನ್ನು ಪಕ್ಷಕ್ಕೆ ಕರೆದುಕೊಳ್ಳದೆ ಬೇರೆ ವಿಧಿ ಇಲ್ಲ ಎಂದು ಶ್ರೀ ಕೃಷ್ಣ ಉಪಾಧ್ಯಾಯ ಹೇಳಿದ್ದಾರೆ. ಅರುಣ್ ಕುಮಾರ್ ಪುತ್ತಿಲ ಹಿಂದೆ ಬಹುದೊಡ್ಡ ಪಡೆ ಇದೆ. ಅರುಣಣ್ಣನ ಜೊತೆ ಇರುವ ಟೀಂ ಬೇರೆ ಯಾರಿಗೂ ಸಿಕ್ಕಿಲ್ಲ. ಆ ಕಾರಣದಿಂದಲೇ ಪುತ್ತೂರಿನ ಚುನಾವಣೆ ಹೈಲೈಟ್ ಆಗಿದೆ. ಪುತ್ತಿಲ ಲೀಡರ್ಶಿಪ್ನಲ್ಲಿ ಸೇರುವಷ್ಟು ಜನ ಸೇರಿಸಲು ಯಾರಿಂದಲೂ ಸಾಧ್ಯವಿಲ್ಲ. ಈ ಕಾರಣಕ್ಕಾಗಿಯೇ ಅರುಣ್ ಕುಮಾರ್ ಪುತ್ತಿಲ ಅವರಿಗೆ ಹುದ್ದೆ ಕೊಡಬೇಕೆಂದು ಕೇಳುತ್ತಿದ್ದೇವೆ ಎಂದು ಉಪಾಧ್ಯಾಯ ಹೇಳಿದ್ದಾರೆ.