ಪುತ್ತೂರು: ಪೊಲೀಸ್ ಅರಣ್ಯ ಸಂಚಾರಿ ದಳ ಮತ್ತು ಪುತ್ತೂರು ಅರಣ್ಯ ಇಲಾಖೆಯ ಜಂಟಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಜಿಂಕೆ ಕೊಂಬು ಸಾಗಾಟವನ್ನು ಸೂತ್ರಬೆಟ್ಟು, ಸಾಮೆತ್ತಡ್ಕ ಸಮೀಪ ಪತ್ತೆ ಮಾಡಿ ಜಿಂಕೆ ಕೊಂಬು ಸಹಿತ ಓರ್ವ ಆರೋಪಿಯನ್ನು ವಶಕ್ಕೆ ಪಡೆದು ಕೊಂಡಿದ್ದಾರೆ. ಪೊಲೀಸ್ ಅರಣ್ಯ ಸಂಚಾರಿ ದಳದ ಖಚಿತ ಮಾಹಿತಿಯಂತೆ ಅರಣ್ಯ ಇಲಾಖೆಯು ಜಂಟಿ ಕಾರ್ಯಾಚರಣೆ ನಡೆಸಿತ್ತು.
ಸೂತ್ರಬೆಟ್ಟು ಸಮೀಪ ಮಾರುತಿ ಕಾರಿನಲ್ಲಿ ಜಿಂಕೆ ಕೊಂಬು ಸಾಗಾಟ ಮಾಡುತ್ತಿದ್ದ ವೇಳೆ ಕಾರ್ಯಾಚರಣೆ ನಡೆಸಲಾಗಿದೆ. ಆರೋಪಿ ಕಬಕ ನಿವಾಸಿ ಶೇಖ್ ಅನ್ಸಾರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೋರ್ವ ಆರೋಪಿ ಸಾಮೆತ್ತಡ್ಕ ನಿವಾಸಿ ತಲೆಮರೆಸಿಕೊಂಡಿದ್ದಾರೆ. ಸುಮಾರು ರೂ. ೫೦ ಸಾವಿರ ಮೌಲ್ಯದ ಜಿಂಕೆ ಕೊಂಬು ಮತ್ತು ಕೃತ್ಯಕ್ಕೆ ಬಳಸಿದ ಕಾರನ್ನು ವಶಕ್ಕೆ ಪಡೆದು ಕೊಳ್ಳಲಾಗಿದೆ.
ಪುತ್ತೂರು ಪೊಲೀಸ್ ಅರಣ್ಯ ಸಂಚಾರ ಠಾಣೆಯ ಎಸ್.ಐ ಜಾನಕಿ, ಸಿಬ್ಬಂದಿಗಳಾದ ಉದಯ , ಸಂತೋಷ್, ವಿಜಯ ಸುವರ್ಣ, ಸುಂದರ ಶೆಟ್ಟಿ, ಸರಸ್ವತಿ ಮತ್ತು ಉಪವಲಯ ಅರಣ್ಯ ಅಧಿಕಾರಿ ಶಿವಾನಂದ ಆಚಾರ್ಯ, ಸಂಜಯ್, ಅರಣ್ಯ ರಕ್ಷಕ ಶೇಖರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು. ಆರೋಪಿ ಮತ್ತು ವಶಪಡಿಸಿಕೊಂಡ ಕೊಂಬು ಮತ್ತು ಕಾರನ್ನು ಹೆಚ್ಚಿನ ತನಿಖೆಗಾಗಿ ಪೊಲೀಸ್ ಅರಣ್ಯ ಸಂಚಾರದಳದವರು ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ.