Thursday, June 18, 2026
spot_imgspot_img
spot_imgspot_img

ಪುತ್ತೂರು:(ಡಿ. 27, 28, 29) ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌‌ ನೇತೃತ್ವದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ- 100 ಜೋಡಿಗಳಿಗೆ ಉಚಿತ ಸಾಮೂಹಿಕ ವಿವಾಹ- 3 ದಿನಗಳ ಅದ್ಧೂರಿ ಕಾರ್ಯಕ್ರಮದ ಬಗ್ಗೆ ಪತ್ರಿಕಾಗೋಷ್ಠಿ

- Advertisement -
- Advertisement -

ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌‌ ನೇತೃತ್ವದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ 100 ಜೋಡಿಗೆ ಸಾಮೂಹಿಕ ವಿವಾಹ ಪುತ್ತೂರು ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ದೇವರ ಮಾರು ಗದ್ದೆಯಲ್ಲಿ ಡಿ. 27, 28, 29 ನಡೆಯಲಿದೆ ಎಂದು ಪುತ್ತಿಲ ಸೇವಾ ಟ್ರಸ್ಟ್ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಮಾಹಿತಿ ನೀಡಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸೆಂಬರಿನಲ್ಲಿ ಅದ್ದೂರಿಯಾಗಿ ಶ್ರೀನಿವಾಸ ಕಲ್ಯಾಣೋತ್ಸವ ನಡೆದಿದೆ. ಅದೇ ರೀತಿ ಈ ಬಾರಿಯೂ ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ದಿನ ನಿಗದಿ ಮಾಡಲಾಗಿದೆ. 2025ರ ಡಿ. 27, 28ರಂದು ಶ್ರೀನಿವಾಸ ಕಲ್ಯಾಣೋತ್ಸವ ಜರಗಲಿದ್ದು, 29ರಂದು ದೇವರ ಎದುರಿನಲ್ಲೇ ಸಾಮೂಹಿಕ ವಿವಾಹ ನಡೆಯಲಿದೆ ಎಂದರು.

ಈ ವರ್ಷ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ 100 ವರ್ಷ ತುಂಬಿದ್ದು, ಈ ಹಿನ್ನೆಲೆಯಲ್ಲಿ 100 ಜೋಡಿಗಳಿಗೆ ಸಾಮೂಹಿಕ ವಿವಾಹ ನಡೆಸಬೇಕೆಂಬ ಸಂಕಲ್ಪ ನಮ್ಮದು. ನೂರು ಜೋಡಿಗಳಿಗೆ ವಿವಾಹ ನಡೆಸುವುದೆಂದರೆ ಸಣ್ಣ ವಿಷಯವಲ್ಲ ಎಂಬ ವಿಚಾರ ತಿಳಿದಿದೆ. ಯಾವುದೇ ಗೊಂದಲಗಳಿಗೆ ಆಸ್ಪದ ಆಗಬಾರದು ಎಂಬ ಹಿನ್ನೆಲೆಯಲ್ಲಿ ಈಗಲೇ ಸಿದ್ಧತೆ ಆರಂಭಿಸಿದ್ದೇವೆ. ಕಚೇರಿಯನ್ನು ಆರಂಭಿಸಿದ್ದೇವೆ. ಈಗಲೇ 8 ಜೋಡಿಗಳಿಂದ ಅರ್ಜಿ ಬಂದಿದೆ. ವಿವಾಹದ ಅಪೇಕ್ಷಿಗಳು ಗ್ರಾಮ ಪಂಚಾಯತ್ ದೃಢೀಕರಣ ಪತ್ರ, ಮನೆ ವಿಳಾಸವಿರುವ ಗುರುತು ಪತ್ರ, ಎರಡೂ ಕಡೆಯ ಒಪ್ಪಿಗೆ ಪತ್ರದೊಂದಿಗೆ ಕಚೇರಿಯನ್ನು ಸಂಪರ್ಕಿಸುವಂತೆ ತಿಳಿಸಿದರು.

ಕರಿಮಣಿಯಿಂದ ಹಿಡಿದು ಮದುವೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ಟ್ರಸ್ಟ್’ನಿಂದಲೇ ನೀಡಲಾಗುವುದು. ಮದುವೆ ದಿನ ವರ – ವಧುವಿನ ಕಡೆಯವರು ಎಷ್ಟೇ ಜನ ಬಂದರೂ ಔತಣದ ವ್ಯವಸ್ಥೆಯನ್ನು ಮಾಡುತ್ತೇವೆ ಎಂದರು.

ಗೋ ಶಾಲೆಗೆ ಗೋಮಾಳದ ಜಾಗಕ್ಕೆ ಮನವಿ:
ಪೇಜಾವರ ಶ್ರೀಗಳ ಅಪೇಕ್ಷೆಯಂತೆ ಗೋಶಾಲೆ ನಿರ್ಮಾಣ ಮಾಡುವ ಕಾರ್ಯಕ್ಕೂ ಮುಂದಾಗಿದ್ದೇವೆ. ಇದಕ್ಕಾಗಿ ಮುಂಡೂರಿನಲ್ಲಿ ಗೋಮಾಳದ ಜಾಗ ನೋಡಲಾಗಿದೆ. ಈ ಜಾಗವನ್ನು ಮಂಜೂರು ಮಾಡುವಂತೆ ಕಂದಾಯ ಇಲಾಖೆಗೆ ಅವರಿಗೆ ಮನವಿ ನೀಡಲಾಗಿದೆ. ಸರಕಾರ ಜಾಗ ಮಂಜೂರು ಮಾಡಿದರೆ ಗೋಶಾಲೆ ನಿರ್ಮಾಣ ಮಾಡುತ್ತೇವೆ. ಇದರೊಂದಿಗೆ ವರ್ಷಪೂರ್ತಿ ಧರ್ಮ ಜಾಗೃತಿಯ ಕೆಲಸ ನಿರಂತರವಾಗಿ ನಡೆಯಲಿದೆ. ಎರಡು ಮನೆಗಳ ನಿರ್ಮಾಣಕ್ಕೂ ಯೋಜನೆ ರೂಪಿಸಲಾಗಿದೆ.

ಗಿರಿಜಾ ಕಲ್ಯಾಣ:
ಶ್ರೀನಿವಾಸ ಕಲ್ಯಾಣ ಮಾಡುವ ಸಂದರ್ಭ ಗಿರಿಜಾ ಕಲ್ಯಾಣ ಮಾಡಬೇಕೆಂಬ ಸಲಹೆ ಬಂದಿತ್ತು. ಗಿರಿಜಾ ಕಲ್ಯಾಣ, ಸೀತಾ ಕಲ್ಯಾಣ ಮಾಡುವುದಾದರೆ ಮೂರು ವರ್ಷದ ನಂತರ ಆಲೋಚನೆ ಮಾಡಲಾಗುವುದು. ಈ ವರ್ಷದ ಶ್ರೀನಿವಾಸ ಕಲ್ಯಾಣದ ಸಮಿತಿಯನ್ನು ಮುಂದೆ ರಚಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ ಅಧ್ಯಕ್ಷ ಮಹೇಂದ್ರ ವರ್ಮ, ಪ್ರಧಾನ ಕಾರ್ಯದರ್ಶಿ ರವಿ ಕುಮಾರ್ ಮಠ, ಜತೆ ಕಾರ್ಯದರ್ಶಿ ರಾಜು ಶೆಟ್ಟಿ, ಮಾಧ್ಯಮ ಸಂಚಾಲಕ ನವೀನ್ ರೈ ಪಂಜಳ, ಸದಸ್ಯ ಪ್ರಜ್ವಲ್ ಘಾಟೆ ಉಪಸ್ಥಿತರಿದ್ದರು.

- Advertisement -

Related news

error: Content is protected !!