




ಪುತ್ತೂರು: ದೇವಸ್ಥಾನದಲ್ಲಿ ಮಹಿಳೆಯೋರ್ವರ ಕುತ್ತಿಗೆಯಿಂದ ಚಿನ್ನದ ಸರವನ್ನು ಕಳವುಗೈದಿದ್ದು, ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳನ್ನು ತಮಿಳುನಾಡು ಮೂಲದ ಮಾರಿ (40), ಶೀತಲ್ ಯಾನೆ ಪ್ರೀಯ (25) ಮತ್ತು ಕಾಳಿಯಮ್ಮ ಯಾನೆ ಭಗವತಿ (42) ಎಂದು ಗುರುತಿಸಲಾಗಿದೆ.
ಪುತ್ತೂರು ಕೆಮ್ಮಿಂಜೆ ನಿವಾಸಿ ಶ್ರೀಮತಿ ಯಮುನಾ (67) ಎಂಬವರ ದೂರಿನಂತೆ ಡಿ.2ರಂದು ಬೆಳಿಗ್ಗೆ ಪುತ್ತೂರು ತಾಲೂಕು ಕೆಮ್ಮಿಂಜೆ ಗ್ರಾಮದಲ್ಲಿರುವ ದೇವಸ್ಥಾನದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಕ್ಕೆ ತೆರಳಿದ್ದು, ಈ ವೇಳೆ ಸುಮಾರು 14 ಗ್ರಾಂ ತೂಕದ ಚಿನ್ನದ ಸರವನ್ನು ಧರಿಸಿರುತ್ತಾರೆ. ಮಧ್ಯಾಹ್ನ ಸಮಯ ದೇವಸ್ಥಾನದಲ್ಲಿ ಊಟ ಮಾಡಿ ಕೈ ತೊಳೆಯಲು ಹೋದಾಗ ಯಮುನಾರವರಿಗೆ ಮುಖ ಪರಿಚಯ ಇಲ್ಲದ ಮೂರು ಜನ ಅಪರಿಚಿತ ಮಹಿಳೆಯರು ಜೊತೆಯಲ್ಲಿಯೇ ಕೈ ತೊಳೆಯಲು ಬಂದು ಅವರಿಗೆ ಅರಿವಿಗೆ ಬಾರದಂತೆ ಧರಿಸಿದ್ದ ಚಿನ್ನದ ಸರವನ್ನು ಕುತ್ತಿಗೆಯಿಂದ ಕಳವು ಮಾಡಿಕೊಂಡು ಹೋಗಿರುತ್ತಾರೆ.
ಕಳವಾದ ಚಿನ್ನದ ಸರದ ಅಂದಾಜು ಮೌಲ್ಯ ರೂ 60,000/- ಆಗಬಹುದು ಎಂಬುದಾಗಿ ನೀಡಿದ ದೂರಿನ ಮೇರೆಗೆ, ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 128/2025, ಕಲಂ: 303(2) ಬಿ ಎನ್ ಎಸ್ 2023 ರಂತೆ ಪ್ರಕರಣ ದಾಖಲಿಸಲಾಗಿದ್ದು, ಡಿ.26ರಂದು ರಾತ್ರಿ ಪ್ರಕರಣದ ಮೂವರರು ಆರೋಪಿಗಳನ್ನು ಪುತ್ತೂರಿನಲ್ಲಿ ವಶಕ್ಕೆ ಪಡೆಯಲಾಗಿದ್ದು,ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.








