ಪುತ್ತೂರು: ಚುನಾವಣೆ ಪ್ರಣಾಳಿಕೆಯಂತೆ ಸರ್ಕಾರ ಐದು ಭರವಸೆಯನ್ನು ಕೊಟ್ಟಿದೆ. ಹಂತ-ಹಂತವಾಗಿ ಎಲ್ಲ ಕೆಲಸಗಳು ನಡೆಯುತ್ತಿದೆ. ನಾನು ಶಾಸಕನಾದರೆ ಭ್ರಷ್ಟಾಚಾರ ವಿರುದ್ದ ಅಥವಾ ಭ್ರಷ್ಟಾಚಾರ ರಹಿತವಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದ್ದು, ಅಂತೆಯೇ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವಂತಹ ಕೆಲಸವನ್ನು ಮಾಡಿದ್ದೇನೆ ಎಂದು ಪುತ್ತೂರಿನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಪುತ್ತೂರಿನಲ್ಲಿ ಇದೀಗ ಭ್ರಷ್ಟಾಚಾರ ರಹಿತವಾಗಿ ಕೆಲಸ ನಡೆಯುತ್ತಿದ್ದು, ಕೆಲವು ಕಛೇರಿಗೆ ಹೋದರೆ ಬಡವರನ್ನು ಉಪಚರಿಸುವಂತಹ ರೀತಿ ಬದಲಾಗಿದೆ. ಕೆಲವು ಅಧಿಕಾರಿ ತೆಗೆದುಕೊಂಡ ಹಣವನ್ನು ಮರಳಿ ಕೊಟ್ಟ ಘಟನೆಗಳು ನಡೆದಿದೆ. ನೀವು ಬಡವರ, ಸರ್ಕಾರದ ಕೆಲಸ ಮಾಡಿ, ಬಡವರಿಗೆ ಸೇವೆ ಕೊಡುವಂತಹ ಕೆಲಸವನ್ನು ಮಾಡಬೇಕೆಂದು ಹೇಳಿದರು.
ಕೆಎಂಎಫ್ ಅನ್ನು ಪುತ್ತೂರಿಗೆ ಶಿಫ್ಟ್ ಮಾಡಲು ಹತ್ತು ಎಕ್ರೆ ಜಾಗ ಬೇಕಾಗಿದ್ದು ಈ ಬಗ್ಗೆ ಡಿಸಿ ಕಚೇರಿಯಲ್ಲಿ ಪ್ರಸ್ತಾವನೆ ಮಾಡಿದ್ದೇನೆ. ನಾನು ಶಾಸಕನಾಗಿ ಬಂದ ಮೊದಲಿಗೆ ನೀರಿನ ಸಮಸ್ಯೆ ಕಂಡುಬಂದಿದ್ದು, ಕುಡಿಯುವ ನೀರಿನ ಸಮಸ್ಯೆಯನ್ನು ಜನರು ಎದುರಿಸುತ್ತಿದ್ದಾರೆ. ವಿಟ್ಲ ಭಾಗದಲ್ಲಿ ಹೆಚ್ಚಾಗಿ ಈ ಸಮಸ್ಯೆ ಎದುರಾಗಿದೆ. ಜನರು ಕುಡಿಯುವ ನೀರು ಶುದ್ಧ ನೀರಲ್ಲ, ಶುದ್ಧೀಕರಣ ಮಾಡುವಂತಹ ವ್ಯವಸ್ಥೆ ಬಗ್ಗೆ ಪ್ರಸ್ತಾವನೆಯನ್ನು ಮಾಡಿದ್ದು ಅದಕ್ಕಾಗಿ 960ಕೋಟಿ ರೂ. ಅನುದಾನವನ್ನು ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಬಿಡುಗಡೆಯಾಗಿದೆ.
ತುಳುವನ್ನು ಹೆಚ್ಚುವರಿ ಭಾಷೆಯನ್ನಾಗಿ ಸೇರಿಸಬೇಕು. ಬೆಂಗಳೂರಿನಲ್ಲಿ ಕಂಬಳ ಮಾಡಿ ನಮ್ಮ ಸಂಸ್ಕೃತಿ ಆಚಾರ-ವಿಚಾರಗಳನ್ನು ಇಡೀ ಕರ್ನಾಟಕದ ಜನರಿಗೆ ತೋರಿಸಬೇಕು. ಬೆಂಗಳೂರಿನಲ್ಲಿ ತುಳು ಭವನ ನಿರ್ಮಿಸಲು ಒಂದು ಎಕ್ರೆ ಜಾಗವನ್ನು ಮೀಸಲಿಡಬೇಕೆಂದು ಪ್ರಸ್ತಾಪಿಸಿದ್ದೇನೆ ಎಂದರು .ಪುತ್ತೂರಿಗೆ ಮುಖ್ಯವಾಗಿ ಮೆಡಿಕಲ್ ಕಾಲೇಜು. ಅದರೆ ಅದಕ್ಕೆ ಅನುದಾನ ಬಾರದಿದ್ದರೆ ಮುಂದಿನ ಬಜೆಟ್ ಮಂಡನೆ ಮುಂಚೆ ಪುತ್ತೂರಿನಿಂದ ಸಾವಿರಾರು ಮಂದಿ ಸೇರಿಕೊಂಡು ಬೆಂಗಳೂರಿಗೆ ಪಾದಯಾತ್ರೆ ಮೂಲಕ ತೆರಳಿ ಸರಕಾರದ ಗಮನಕ್ಕೆ ತರುವ ಪ್ರಯತ್ನ ಮಾಡಲಾಗುವುದು ಎಂದರು.
ಯುವಕರಿಗೆ ಉದ್ಯೋಗ ಸಿಗಬೇಕು ಅದಕ್ಕಾಗಿ ಉದ್ಯೋಗ ಕೊಡುವ ಇಂಡಸ್ಟ್ರಿ , ಮೆಡಿಕಲ್ ಕಾಲೇಜ್, ರೈಲ್ವೇ ಸ್ಟೇಷನ್, ನ್ಯಾಷನಲ್ ಹೈವೆ ಆಗಬೇಕು. ಐದು ವರ್ಷದಲ್ಲಿ ಪುತ್ತೂರಿನ ಅಭಿವೃದ್ದಿ ಆಗಬೇಕು ಎಂದು ಈ ವೇಳೆ ತಿಳಿಸಿದರು.