ಪುತ್ತೂರಿನ ಲಾಡ್ಜ್ವೊಂದರಲ್ಲಿ ಹಿಂದೂ ಮಹಿಳೆಯ ಜೊತೆ ಅನ್ಯಕೋಮಿನ ವ್ಯಕ್ತಿ ಹಾಗೂ ಇನ್ನೋರ್ವ ಹಿಂದೂ ಯುವಕ ಪತ್ತೆಯಾಗಿದ್ದು ಇದನ್ನು ಗಮನಿಸಿದ ಹಿಂದೂ ಕಾರ್ಯಕರ್ತರು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ಈ ಪ್ರಕರಣಕ್ಕೆ ಸಂಬ0ಧಿಸಿ ಅಲ್ಲಿದ್ದ ಬೆಂಗಳೂರು ಆನೆಕಲ್ ಮೂಲದ ಮಹಿಳೆ ರಾಜೇಶ್ವರಿ ಎಂಬಾಕೆ ಪುತ್ತೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪುತ್ತೂರು ನಗರ ಪೊಲೀಸರ ವಶದಲ್ಲಿದ್ದ ತನ್ನ ಮಾಲೀಕತ್ವದ ಕಾರು ಒಂದನ್ನು ಬಿಡಿಸಿಕೊಳ್ಳುವ ಸಲುವಾಗಿ ತನ್ನ ಜೊತೆ ಕೆಲಸ ಮಾಡುತ್ತಿರುವ ಮಂಗಳೂರು ಉಳ್ಳಾಲ ನಿವಾಸಿ ಯು.ಕೆ ಮಹಮ್ಮದ್ ಅರಾಫತ್ ಮತ್ತು ಬೆಂಗಳೂರು ಕೊಟ್ಟಿಗೇರಿ ನಿವಾಸಿ ಶಿವ ಎಂಬವರ ಜೊತೆ ಪುತ್ತೂರಿಗೆ ಆಗಮಿಸಿದ್ದೆ. ಈ ವೇಳೆ ಪುತ್ತೂರು ಆಶ್ಮಿ ಲಾಡ್ಜ್ ನಲ್ಲಿ ಮೂವರು ತಂಗಿದ್ದು 18.55 ಗಂಟೆಗೆ ಲಾಡ್ಜ್ ನಲ್ಲಿ ಮೂರು ಜನರು ಜೊತೆಯಲ್ಲಿ ಊಟ ಮಾಡಿಕೊಂಡಿದ್ದಾಗ ಲಾಡ್ಜ್ ನ ಹೊರಗಡೆ ಸುಮಾರು 10 ಜನರ ಗುಂಪು ಸೇರಿತ್ತು. ಅಲ್ಲಿದ್ದ 4-5 ಮಂದಿ ಬಳಿಗೆ ಬಂದು ಜೊತೆಯಲ್ಲಿದ್ದವರ ಹೆಸರು ವಿಳಾಸ ಕೇಳಿ ಆ ಬಳಿಕ ನನಗೆ ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಅಂತೆಯೇ ಅಲ್ಲಿ ಸೇರಿದ ಗುಂಪು ಶಿವ ಎಂಬವರಿಗೆ ಕೈಯಿಂದ ಹೊಡೆದಿರುತ್ತಾರೆ. ಫೋಟೋ ತೆಗೆದು ಅವಮಾನ ಪಡಿಸಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.