ಪುತ್ತೂರು: ಪುತ್ತೂರು ತಾಲೂಕು ಬಡಗನ್ನೂರು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಸುಳ್ಯಪದವು ಗ್ರಾಮಾಂತರ ಪ್ರದೇಶಗಳಲ್ಲಿ ಕೇರಳದಿಂದ ಅಕ್ರಮವಾಗಿ ಬಡಗನ್ನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ರಸ್ತೆಗಳಲ್ಲಿ ಕೆಂಪು ಕಲ್ಲು ಸಾಗಾಟ ಮಾಡುತ್ತಿರುವುದಾಗಿ ಸಾರ್ವಜನಿಕರಿಂದ ದೂರುಗಳು ಕಚೇರಿಗೆ ಸ್ವೀಕೃತವಾದ ಹಿನ್ನೆಲೆಯಲ್ಲಿ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಂಗಳೂರು ಇದರ ಉಪನಿರ್ದೇಶಕರು ಆದೇಶಿಸಿದ್ದು, ಅದರಂತೆ, ಭೂ ವಿಜ್ಞಾನಿಯವರು ಅವರ ಸಿಬ್ಬಂದಿಗಳೊಂದಿಗೆ ದಿನಾಂಕ 5.5. 2018 ರಂದು 9:00ಗೆ ಬಡಗನ್ನೂರು ಗ್ರಾಮದ ಪಂಚಾಯಿತಿ ಹತ್ತಿರ ತಲುಪಿದಾಗ ಪಂಚಾಯತಿನಿಂದ ಸುಮಾರು 200 ಮೀಟರ್ ದೂರದಲ್ಲಿ ಬರುತ್ತಿದ್ದ ಲಾರಿಯನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ, ಆ ವಾಹನದಲ್ಲಿ ಕೆಂಪು ಕಲ್ಲು / ಮುರಕಲ್ಲು ತುಂಬಿಸಿರುವುದು ಕಂಡುಬಂದಿರುತ್ತದೆ.
ನಂತರ ಲಾರಿ ಚಾಲಕನನ್ನು ವಿಚಾರಿಸಿದಾಗ, ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಕೆಂಪು ಕಲ್ಲನ್ನು ಸಾಗಾಣಿಕೆ ಮಾಡುತ್ತಿರುವುದು ದೃಢಪಟ್ಟಿದ್ದು, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ತಿಳಿಸಿ ಲಾರಿಯನ್ನು ವಶಪಡಿಸಿ, ಲಾರಿ ಚಾಲಕ ಪುಷ್ಪರಾಜ್ ಮತ್ತು ಲಾರಿ ಮಾಲೀಕ ಗಂಗಾಧರ ಸುವರ್ಣ ವಿರುದ್ಧ ದೂರನ್ನು ದಾಖಲಿಸಿದ್ದರು.
ಆರೋಪಿಗಳು ತಮ್ಮ ಪರ ವಕೀಲ ಮಹೇಶ್ ಕಜೆ ಅವರ ಮುಖಾಂತರ ಪುತ್ತೂರಿನ ಮಾನ್ಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದರು. ಆರೋಪಿಗಳು ಈ ಕೃತ್ಯ ನಡೆಸಿದ್ದಾರೆ ಎಂಬುದಕ್ಕೆ ಯಾವುದೇ ಪೂರಕವಾದ ಸಾಕ್ಷ್ಯಧಾರಗಳು ಇಲ್ಲದಿರುವುದರಿಂದ ದೂರಿನಲ್ಲಿ ವಿಳಂಬ, ಎಂಬಿತ್ಯಾದಿ ಅಂಶಗಳನ್ನು ವಾದಿಸಿದ್ದರು. ಸರಕಾರಿ ಅಭಿಯೋಜಕರು ಜಾಮೀನು ಅರ್ಜಿಗೆ ಆಕ್ಷೇಪವನ್ನು ಸಲ್ಲಿಸಿದ್ದರು. ವಾದ ವಿವಾದಗಳನ್ನು ಆಲಿಸಿದ ಪುತ್ತೂರಿನ ಮಾನ್ಯ ಮತ್ತು ಸತ್ರ ನ್ಯಾಯಾಲಯದ ಪ್ರಭಾರ ನ್ಯಾಯಾಧೀಶರಾದ ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ.ಕಾಂತರಾಜು ಎಸ್ ವಿ ರವರು ಆರೋಪಿಗಳಿಗೆ ಶರತ್ತು ಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದಾರೆ.