ಪುತ್ತೂರು: ಯುವತಿಯೋರ್ವಳಿಗೆ ಚೂರಿ ಇರಿದ ಘಟನೆ ಮುಂಡೂರಿನಲ್ಲಿ ನಡೆದಿದ್ದು , ಯುವತಿ ಮೃತಪಟ್ಟಿದ್ದಳು.
ಮೃತ ಯುವತಿಯನ್ನು ಮುಂಡೂರು ಕಂಪ ನಿವಾಸಿ ದಿ.ಗುರುವಪ್ಪ ಮತ್ತು ದೇವಕಿದಂಪತಿಗಳ ಪುತ್ರಿ ಜಯಶ್ರೀ (23) ಎಂದು ಗುರುತಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕನಕಮಜಲಿನ ಅಂಗಾರರವರ ಪುತ್ರ ಉಮೇಶ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದು , ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ದೂರಿನಲ್ಲಿ ಏನಿದೆ..?
ಜಯಶ್ರೀ ಬಿ.ಎಸ್.ಸಿ. ಪದವಿ ಮುಗಿಸಿ, ಮನೆಯಲ್ಲಿ ಇದ್ದು, ತಾಯಿ ದನಗಳಿಗೆ ಹುಲ್ಲನ್ನು ತರಲು ಮನೆಯ ಎದುರಿನ ತೋಟಕ್ಕೆ ಹೋಗಿ ತೋಟದಲ್ಲಿ ಹುಲ್ಲನ್ನು ತೆಗೆಯುತ್ತಿದ್ದಾಗ, ಹುಲ್ಲು ತೆಗೆಯುವಲ್ಲಿಗೆ ಅಮ್ಮಾ ಎಂದು ಕೂಗಿಕೊಂಡು ಬಂದಿರುತ್ತಾಳೆ. ಆಗ ಅವಳ ಹೊಟ್ಟೆಯಲ್ಲಿ ಗಾಯವಾಗಿ ರಕ್ತ ಸ್ರಾವವಾಗುತ್ತಿರುವುದು ಕಂಡ ತಾಯಿ ಗಿರಿಜಾ ಆಟೋ ರಿಕ್ಷಾದಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆ ತಂದಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ಜಯಶ್ರೀ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಜಯಶ್ರೀ ಕೆಲವು ಸಮಯದಿಂದ ಕನಕಮಜಲಿನ ಉಮೇಶ್ ಎಂಬಾತನನ್ನು ಪ್ರೀತಿಸುತ್ತಿದ್ದು, ಆತನು ಆಗಾಗ ಮನೆಗೂ ಬಂದು ಹೋಗುತ್ತಿದ್ದ. ಇತ್ತೀಚೆಗೆ ಅವನ ಗುಣ ನಡತೆ ಇಷ್ಟವಾಗದೇ ಜಯಶ್ರೀ ಆತನಿಂದ ದೂರವಾಗಿದ್ದಳು. ಇದರಿಂದ ಉಮೇಶ್ ಅಸಮಾಧಾನಗೊಂಡಿದ್ದ. ಇದೇ ದ್ವೇಷದಿಂದ ಆತ ಕೃತ್ಯ ನಡೆಸಿರಬಹುದೆಂದು ಅಂದಾಜಿಸಲಾಗಿದೆ. ಯುವತಿಯ ಮನೆ ಹಾಗೂ ಯುವತಿಯ ಬಗ್ಗೆ ಆತನಿಗೆ ಮಾತ್ರ ಸಂಪೂರ್ಣ ಮಾಹಿತಿ ಇತ್ತು ಎನ್ನಲಾಗಿದೆ. ಈ ಕಾರಣಕ್ಕಾಗಿ ಸಂದರ್ಭವನ್ನು ಬಳಸಿಕೊಂಡು ಮನೆಗೆ ಬಂದು ಚಾಕುವಿನಿಂದ ಇರಿದು ಹತ್ಯೆ ನಡೆಸಿರಬಹುದೆಂದು ಮೃತಳ ತಾಯಿ ಗಿರಿಜಾ ಶಂಕೆ ವ್ಯಕ್ತಪಡಿಸಿ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.